ಸ್ವತಂತ್ರ ಧರ್ಮವಾಗಿದ್ದರೆ ಉಪಜಾತಿಗಳು ಲಿಂಗಾಯತ ಎಂದೇ ಬರೆಸಿ ಮೀಸಲಾತಿ ಪಡೆಯಬಹುದಿತ್ತು.
ಸಿಂಧನೂರು
ಕರ್ನಾಟಕದ ಇಂದಿನ ಸುದ್ದಿಗಳಲ್ಲಿ ಬಹಳ ಪ್ರಮುಖವಾದುದು ಜಾತಿ ಸಮೀಕ್ಷಾ ವರದಿಯ ಅಧ್ಯಯನ. ಯಾವುದೇ ಸರಕಾರ ಬರಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಸಂಕಷ್ಟ ಅನುಭವಿಸುವದು, ಜಾತಿ ಮೀಸಲಾತಿ ವಿಷಯಗಳನ್ನು ನಿರ್ಧರಿಸುವ ವಿಷಯಗಳಲ್ಲಿ.
ಒಬ್ಬ ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧಿಗಳಿಗೆ ಸರಳ ಮಾರ್ಗ ಎಂದರೆ ಮೀಸಲಾತಿ ಚಳುವಳಿಗಳಿಗೆ ಪ್ರೋತ್ಸಾಹ ಕೊಡುವದು. ಕುರುಬರು ಎಸ್. ಟಿ. ಮೀಸಲಾತಿಗಾಗಿ ಹೋರಾಡಿದ್ದು, ನಾಯಕ ಸಮಾಜ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮಾಡಿದ ಹೋರಾಟ, ಲಿಂಗಾಯತದ ಪಂಚಮಸಾಲಿಗಳು 2 ಎ ಮೀಸಲಾತಿಗಾಗಿ ಹೋರಾಟ ಮಾಡಿದ್ದು, ಇವೆಲ್ಲವು ರಾಜಕೀಯ ವ್ಯಕ್ತಿಗಳು ಸಮುದಾಯಗಳ ವಿಶ್ವಾಸ ಪಡೆದು ನಾಯಕರಾಗಲು ಮತ್ತು ಆಗಿನ ಮುಖ್ಯಮಂತ್ರಿಗಳ ವಿರೋಧಿಗಳು ಬಳಸಿಕೊಂಡ ಅಸ್ತ್ರಗಳು.
ಈ ಸಂಧರ್ಭದಲ್ಲಿ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ, ಜಾತಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಕಾಂತರಾಜ ಆಯೋಗವನ್ನು ಸಿದ್ಧರಾಮಯ್ಯನವರು ರಚಿಸಿದರು. ಅದು ತಮಗೆ ತಾವೇ ತಂದುಕೊಂಡ ಆಪತ್ತು ಎಂದು ಅವರಿಗೆ ಆವಾಗ ತಿಳಿಯಲಿಲ್ಲ. ಆಯೋಗ ವರದಿ ಸಲ್ಲಿಸಿದ ನಂತರ ಅದನ್ನ ತಮ್ಮ ಅವಧಿಯಲ್ಲಿ ತಿರುಗಿ ಕೂಡ ನೋಡಲಿಲ್ಲ.
ಅಂದಿನ ಸಂಧರ್ಭದಲ್ಲಿ ಹಿಂದುಳಿದ ವರ್ಗಗಳ ಮೇಲೆ ಸಿದ್ಧರಾಮಯ್ಯನವರ ಪ್ರೀತಿ ಮೆಚ್ಚಬೇಕಾದ್ದು, ಅದು ರಾಜಕೀಯ ನಾಯಕರಿಗೆ ಇರಬೇಕಾದ ಗುಣವೂ ಸಹ. ಆದರೆ ಸಾಮಾಜಿಕ ಸುಧಾರಣೆ ತರಲು ಬಯಸುವ ಯಾರೇ ಆದರೂ ಉಳಿದ ಜಾತಿಗಳ ಬಗ್ಗೆ ಅಸಹನೆ ಹೊಂದಿರಬಾರದು. ಎರಡನೇ ಭಾಗದಲ್ಲಿ ಸಿದ್ಧರಾಮಯ್ಯನವರು ಅಂದು ಹೊಂದಿದ್ದ ಆ ಗುಣದಿಂದ ಬದಲಾಗಿದ್ದರು. ಈಗ ಇರುವ ಸಿದ್ಧರಾಮಯ್ಯನವರ ವ್ಯಕ್ತಿತ್ವವೇ ಬೇರೆ.
ಆದರೆ ಎರಡನೇ ಅವಧಿಗೆ ಮುಖ್ಯಮಂತ್ರಿ ಆದಾಗ ಅವರಿಗೆ ಎದುರಾದದ್ದು ಈ ಸಮಸ್ಯೆ. ದಲಿತ ಸಮುದಾಯಗಳ ಒಳಮೀಸಲಾತಿ, ಜಾತಿ ಸಮೀಕ್ಷೆ ವರದಿ ಪರಿಶೀಲನೆ ಇವುಗಳು ಅವರ ಅಧಿಕಾರಕ್ಕೆ ಕುತ್ತು ತರುವಷ್ಟು ಅಪಾಯಕಾರಿಯಾಗಿ ಪರಿಣಮಿಸಿದವು.
ಅದೇನೇ ಇರಲಿ ಜಾತಿ ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ, ಕೇವಲ ಸ್ಯಾಂಪಲ್ ಗಳ ಆಧಾರದ ಮೇಲೆ ವರದಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಂಡಿದ್ದಾರೆ ಎನ್ನುವದು ಬಹುತೇಕ ಲಿಂಗಾಯತ ಮತ್ತು ಒಕ್ಕಲಿಗ ನಾಯಕರ ವಾದ. ಅದನ್ನು ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಮತ್ತು ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಅವರು ನೇರವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಅವರ ವಾದ ಏನೆಂದರೆ ಒಂದೂವರೆ ಕೋಟಿ ಇರುವ ಲಿಂಗಾಯತರ ಸಂಖ್ಯೆಯನ್ನು 66 ಲಕ್ಷಕ್ಕೆ ಇಳಿಸಲಾಗಿದೆ.
“ಧರ್ಮ ಲಿಂಗಾಯತ” ಎಂದು ದಾಖಲಿಸಿದರೆ ಉಪಜಾತಿಗಳಿಗೆ ಸಿಗುವ ಮೀಸಲಾತಿ ಸಿಗುವದಿಲ್ಲ ಎಂಬ ಕಾರಣಕ್ಕೆ ಲಿಂಗಾಯತ ಉಪಪಂಗಡಗಳೆಲ್ಲ, ಹಿಂದೂ ಬಣಜಿಗ, ಹಿಂದೂ ಬೇಡ ಜಂಗಮ, ಹಿಂದೂ ರೆಡ್ಡಿ, ಹಿಂದೂ ಹಡಪದ, …. ಎಂದು ಬರೆಸಿದ್ದು ಒಂದು ಕಾರಣವಾದರೆ, ಲಿಂಗಾಯತ ಜೊತೆಗೆ ವೀರಶೈವ ಸೇರಿಸಿದ್ದು ಮತ್ತೊಂದು ಕಾರಣವೆಂದು ಎಲ್ಲರಿಗೂ ಮನದಟ್ಟಾಗಿದೆ.
ಈಗ ಮತ್ತೊಮ್ಮೆ ಸಮೀಕ್ಷೆ ಮಾಡಿ ವರದಿ ತರಿಸಿಕೊಳ್ಳಿ ಎನ್ನುವದು ಮಹಾಸಭೆ ನಾಯಕರ ವಾದವಾಗಿದೆ. ಮತ್ತೊಮ್ಮೆ ಸಮೀಕ್ಷೆ ಮಾಡಿದರೆ ಸಂಖ್ಯೆ ಬದಲಾಗಬಹುದೇ? ಹಿಂದೂ ಗಾಣಿಗ, ಹಿಂದೂ ಬಣಜಿಗ, ಹಿಂದೂ ಬೇಡ ಜಂಗಮ, ಹಿಂದೂ ರೆಡ್ಡಿ ಎಂದು ಬರೆಸಿದವರು ಒಟ್ಟಾಗಿ “ಲಿಂಗಾಯತ ” ಎಂದು ಬರೆಸಲು ಸಿದ್ಧರಿದ್ದಾರೆಯೇ? ಮಹಾಸಭೆಯ ನಾಯಕರು ಇದನ್ನ ಯೋಚಿಸಬೇಕಲ್ಲವೇ?
2018ರಲ್ಲಿ ಎಲ್ಲರೂ ಒಟ್ಟಾಗಿ “ಸ್ವತಂತ್ರ ಲಿಂಗಾಯತ” ಹೋರಾಟಕ್ಕೆ ಅಣಿಯಾದಾಗ ಇದೇ ವೀರಶೈವ ಮಹಾಸಭೆಯ ನಾಯಕರು, ಪಂಚಪೀಠದವರು ಒಕ್ಕೊರಲಾಗಿ “ಧರ್ಮ ಒಡೆದರು” ಎಂದು ಕೇಸರಿ ಮಾಧ್ಯಮದವರ ಜೊತೆಗೂಡಿ ಹುಯಿಲೇಬ್ಬಿಸಿದ್ದು ಇಂದಿನ ಲಿಂಗಾಯತ ಸಂಖ್ಯೆ ಇಳಿಯುವದಕ್ಕೆ ಕಾರಣವಾಗಿದೆ ಎನ್ನುವದು ಎಲ್ಲರಿಗೂ ಮನದಟ್ಟಾಗಿದೆ.
ಪಂಚಪೀಠದ ಸ್ವಾಮಿಗಳಿಗೆ, ಪಟ್ಟಭದ್ರ ಲಿಂಗಾಯತರಿಗೆ ಬಸವಪ್ರಣೀತ ಲಿಂಗಾಯತ ಧರ್ಮ ಮುಕ್ತವಾಗಿ ಎಲ್ಲ ಜಾತಿ ವರ್ಗ ಕೋಮುಗಳಿಗೆ ತೆರೆದಿಡುವದು ಬೇಕಿಲ್ಲ, ಅದು ಒಂದು ಜಾತಿಯಾಗಿಯೇ ಉಳಿಯಬೇಕು. ಈ ಕಾರಣಕ್ಕೆ ಅವರು ಸ್ವತಂತ್ರ ಧರ್ಮ ಆಗುವುದನ್ನು ವಿರೋಧಿಸುತ್ತಿರುವದು. ಅದರ ಪರಿಣಾಮವನ್ನು ಈಗ ಅನುಭವಿಸುತ್ತಿದ್ದಾರೆ.
ಸ್ವತಂತ್ರ ಧರ್ಮವಾಗಿದ್ದರೆ ಉಪಜಾತಿಗಳು ಲಿಂಗಾಯತ ಎಂದೇ ಬರೆಸಿ ಮೀಸಲಾತಿ ಪಡೆಯಬಹುದಿತ್ತು.
ಧರ್ಮ ಒಡೆಯಿತು ಎಂದವರೇ ಉಪಜಾತಿಗಳನ್ನು ಧರ್ಮದಿಂದ ಹೊರ ನಡೆಯಲು ಅವಕಾಶ ಮಾಡಿಕೊಟ್ಟರೆ ಎಂದು ಪ್ರಜ್ಞಾವಂತ ಲಿಂಗಾಯತರು ಈಗ ಕೇಳುತ್ತಿದ್ದಾರೆ.
ನಾವು ಹಿಂದೂ ಧರ್ಮದವರು ಅಲ್ಲ, ನಾವು ಲಿಂಗಾಯತರು ಸ್ವತಂತ್ರರು ಎಂದು ಎಲ್ಲ ಕಡೆ ಹೇಳುವ ಶಾಮನೂರರು ಈಗಲಾದರೂ ಸ್ವತಂತ್ರವಾಗಿ ಆಲೋಚಿಸಿ, ನಿರ್ಧಾರ ತೆಗೆದುಕೊಳ್ಳಬಲ್ಲರೆ? ಮಹಾಸಭೆ ಸ್ವತಂತ್ರವಾದ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಇದಕ್ಕಿಂತ ಹೆಚ್ಚಿನ ಸಮಸ್ಯೆಗಳು ಬರುವದು ಖಂಡಿತ.
ಈಗಲಾದರೂ ಬಸವಣ್ಣನರನ್ನು “ಧರ್ಮಗುರು”, ವಚನಗಳು “ಧರ್ಮ ಸಂಹಿತೆ”ಎಂದು ಒಪ್ಪಿ ನಡೆಯಲು ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆಯೆ? ಪಂಚಪೀಠದವರನ್ನು ಒಪ್ಪಿಸುತ್ತಾರೆಯೇ? ಅದು ಸಾಧ್ಯವಾಗದಿದ್ದರೆ ದಯವಿಟ್ಟು ಬಸವಣ್ಣ ನಮ್ಮವರು ಎನ್ನುವುದನ್ನ ಬಿಡಲು ಪೀಠಗಳಿಗೆ ತಿಳಿಸಿ, ಪ್ರಜ್ಞಾವಂತ ಲಿಂಗಾಯತರು ಮತ್ತು ಇತರ ಪ್ರಜ್ಞಾವಂತ ಸಮುದಾಯದವರು ಬಸವರನ್ನು ಧರ್ಮಗುರು ಎಂದು ಒಪ್ಪಿ ನಡೆಯಲು ಸಿದ್ಧರಿದ್ದಾರೆ.
ಬಸವಣ್ಣನವರನ್ನು “ಜಾತಿ ಕಟ್ಟಳೆ”ಯಿಂದ ಮುಕ್ತ ಮಾಡಿ. ಇದರಿಂದ ಮಾತ್ರ ಬಸವರು ಬಯಸಿದ ಆರೋಗ್ಯಪೂರ್ಣ ಸಮಾಜ, ಕಲ್ಯಾಣರಾಜ್ಯ ಕಟ್ಟಲು ಸಾಧ್ಯವಾಗಬಹುದು.
ಈ ತರಹದ ಗೊಂದಲಗಳಿಗೆ ಧರ್ಮ ಮುಖಂಡರೆನಿಸಿ ಕೊಂಡವರ ಅಜ್ಞಾನ ಮತ್ತು ಸಂವಿದಾನ ಮತ್ತು ಮೀಸಲಾತಿಗಳ ಬಗ್ಗೆ ಅರಿವಿಲ್ಲದೇ ಇರುವುದು. ಲಿಂಗಾಯತ ಧರ್ಮವನ್ನು ವೀರಶೈವಲಿಂಗಾಯತ ಮಾಡಲು ಹೋದವರು ಯಾರು? ಲಿಂಗಾಯತ ಧರ್ಮವನ್ನು ಒಡೆದವರು ಯಾರು? ಲಿಂಗಾಯತರು ಲಿಂಗಾಯತರಾಗಿ ಉಳಿದು ಲಿಂಗಾರತ ಸಂಘಟನೆ ರಚಿಸಿಕೊಂಡಿದ್ದು ತಪ್ಪೇ?
ಲಿಂಗಾಯತರನ್ನು ಒಡೆದವರು ವೀರಶೖವ ಲಿಂಗಾಯತವೆಂದು ಒಡಕುಮಾಡಿದವರು. ಇವರಲ್ಲಿ ಮತ್ತೆ ಬೇಡಜಂಗಮ ಎಂದು ಹೊಸದೊಂದು ಒಡಕುಮೂಡಿಸಿದವರು ಈ ಜಾತಿಜಂಗಮರು. ಇವರು ಲಿಂಗಾಯತದ ಅಂರಂಗದ ಮತ್ತು ಬಹಿರಂಗದ ದ್ರೋಹಿಗಳು. ಕಾಂಗ್ರೆಸ್ ಸರಕಾರವು ಒಡಕುಮಾಡಿಲ್ಲ