ಗದಗ
ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರ ಗ್ರಾಮದ ಸಮಾರಂಭದಲ್ಲಿ ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ಲಿಂಗಾಯತ ಮಠಾಧಿಪತಿಗಳನ್ನು ಅಸಾಂವಿಧಾನಿಕ ಪದಗಳಲ್ಲಿ ನಿಂದಿಸಿರುವುದು ಖಂಡನಾರ್ಹವಾಗಿದೆ.
ಲಿಂಗಾಯತ ಧರ್ಮ ಹಾಗೂ ಬಸವಾದಿ ಶರಣ ಪರಂಪರೆಯ ಬಗ್ಗೆ ಅಸಮಾಧಾನ ಹಾಗೂ ಪೂರ್ವಾಗ್ರಹ ಹೊಂದಿರುವ ಅವರ ಮಾತುಗಳು ಕರ್ಣಕಠೋರವಾಗಿರುವುದಷ್ಟೇ ಅಲ್ಲ ಅವರು ತಾವೊಬ್ಬ “ಅನಾಗರಿಕ ವ್ಯಕ್ತಿ” ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಸಾಮಾನ್ಯರೂ ಕೂಡ ಬಳಸಲು ಹಿಂದೇಟು ಹಾಕುವ ಕೀಳು ಪದಗಳನ್ನು ಬಳಸಿದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಗಳು, ತಾವೂ ಒಬ್ಬ ಮಠಾಧಿಪತಿ ಎಂಬುದನ್ನು ಮರೆತು ಎಲ್ಲ ಮಠಾಧಿಪತಿಗಳ ತಾಯಂದಿರನ್ನು ‘ಸೂಳೆ’ ಎಂದು ಹೇಳುವ ಮೂಲಕ ಸಮಸ್ತ ಸ್ತ್ರೀ ಸಂಕುಲಕ್ಕೆ ಅಪಮಾನವೆಸಗಿದ್ದಾರೆ.
ಮಠಾಧಿಪತಿಗಳನ್ನು …. ಹೊಡೆಯಬೇಕು ಎಂದು ಹೇಳುವ ಇವರ ಮಾತುಗಳು ಭಾರತೀಯ ಸಂಸ್ಕೃತಿಗೆ ಕಳಂಕ. ನಾಲಿಗೆ ಕುಲವನ್ನು ಹೇಳಿತು ಎಂಬಂತಿದೆ ಇವರ ನಡವಳಿಕೆ.
ಸಮಾಜದಲ್ಲಿ ಅಶಾಂತಿ, ದೊಂಬಿ, ಗಲಭೆಯನ್ನುಂಟು ಮಾಡುವ ಇಂತಹ ವ್ಯಕ್ತಿಗಳ ನಡವಳಿಕೆಗೆ ಸರಕಾರ ಪ್ರತಿಬಂಧ ವಿಧಿಸಬೇಕೆಂದು ಶ್ರೀಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.