ಮಳವಳ್ಳಿ
ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಯಾವ ದೇಶಕ್ಕೂ ಹೋದರೂ ಬಸವಣ್ಣ ಅವರನ್ನು ನೆನೆಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶನಿವಾರ ಹೇಳಿದರು.
ಪಟ್ಟಣದಲ್ಲಿ ನಡೆದ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿ ಬಸವಣ್ಣನವರ ಸಮ ಸಮಾಜ ನಿರ್ಮಾಣವಾಗಬೇಕಾದರೆ ವೀರವೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ವೈಮನಸ್ಸು ಮರೆತು ಒಗ್ಗೂಡಿ ಕೆಲಸ ಮಾಡಬೇಕು.
ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳಲು ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ. ಆದರೆ ಅದು ಯಶಸ್ವಿಯಾಗಿಲ್ಲ ಮುಂದೆಯೂ ಆಗುವುದಿಲ್ಲ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಸೂಚನೆಯಂತೆ ಕಾರ್ಯಕ್ರಮಕ್ಕೆ ಬಂದಿರುವೆ. ಅವರು ಮುಖ್ಯಮಂತ್ರಿಯಾಗಿದ್ದಾಗ ವೀರವೈವ ಒಕ್ಕಲಿಗ ಸೇರಿದಂತೆ ಎಲ್ಲ ಸಮಾಜದ ಮಠಗಳ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಅನುಭವ ಮಂಟಪಕ್ಕೂ ಅನುದಾನ ನೀಡಿದ್ದಾರೆ ಎಂದರು.
ತಮ್ಮ ಜೀವಿತಾವಧಿಯಲ್ಲಿ ಸಮಾಜದ ಸುಧಾರಣೆಗೆ ಶ್ರಮಿಸಿದ ಶಿವರಾತ್ರೀಶ್ವರ ಶಿವಯೋಗಿಗಳ ಸೇವೆ ಅನನ್ಯ. ಅವರ ಕಾರ್ಯವನ್ನು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಸುತ್ತೂರು ಕ್ಷೇತ್ರ ತ್ರಿವಿಧ ದಾಸೋಹಕ್ಕೆ ಸೀಮಿತವಾಗದೇ ಸಮಾಜದಲ್ಲಿ ನೊಂದವರ ಪಾಲಿಗೆ ನೆರವಾಗಿದೆ. ಸರ್ಕಾರ ಮಾಡದ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಡಿಸೆಂಬರ್ 2026 ಅನುಭವ ಮಂಟಪ
ಕಾರ್ಯಕ್ರಮದಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ₹650 ಕೋಟಿ ವೆಚ್ಚದಲ್ಲಿ ‘ಅನುಭವ ಮಂಟಪ’ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದವು. ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ₹250 ಕೋಟಿ ನೀಡಿದ್ದರು. ನಂತರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಅವರು ₹200 ಕೋಟಿ ಅನುದಾನ ನೀಡಿದ್ದು, ಮುಂದಿನ ಡಿಸೆಂಬರ್ ಒಳಗಡೆ ಅನುಭವ ಮಂಟಪ ಉದ್ಘಾಟನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣ ಮತ್ತು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ. ಇಂಥವರನ್ನು ಸರಿ ದಾರಿಗೆ ತರುವ ಕೆಲಸ ಮಾಡಬೇಕು. ಇಷ್ಟಲಿಂಗ ಪೂಜೆ ಕಲಿಸುವ ಮೂಲಕ ಯುವಕರನ್ನು ಸಮಾಜದಲ್ಲಿ ಉತ್ತಮ ಪಡಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘10ನೇ ಶತಮಾನ ಧಾರ್ಮಿಕ ಪರಂಪರೆಯನ್ನು ವಿಸ್ತರಿಸಲು ಮೈಸೂರಿನ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳು ಧರ್ಮ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಒತ್ತು ನೀಡಿದ್ದಾರೆ. ಮಾನವೀಯತೆ, ಭಕ್ತಿ, ಕಾಯಕ ಸಂಸ್ಕೃತಿಯ ಆಧಾರದ ಮೇಲೆ ಕ್ಷೇತ್ರ ನಿಂತಿದೆ ಎಂದು ಬಣ್ಣಿಸಿದರು.
ವಿವಿಧ ಶಾಲೆಗಳ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕನಕಪುರ ದೇಗುಲ ಮಠದ ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಎಚ್.ಟಿ. ಮಂಜು, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಎಂ.ಬಿದರಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕರಾದ ಕೆ.ಅನ್ನದಾನಿ, ಬಾಲರಾಜು, ನಿರಂಜನ್ ಕುಮಾರ್, ನಾಗಮಣಿ ನಾಗೇಗೌಡ, ಎಡಿಜಿಪಿ ನಂಜುಂಡಸ್ವಾಮಿ, ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜ್, ಮುಖಂಡರಾದ ಎಸ್.ಸಚ್ಚಿದಾನಂದ ಇಂಡುವಾಳು, ಎನ್.ಎಸ್.ಇಂದ್ರೇಶ್, ಲಕ್ಷ್ಮಿಅಶ್ವಿನ್ ಗೌಡ, ಸಂಗಮೇಶ್, ಅಶೋಕ್ ಜಯರಾಮು, ಸ್ವಾಮಿ ಪಾಲ್ಗೊಂಡಿದ್ದರು.

ವಾರಗಳ ಕಾಲ ನಡೆದ ಈ ಜಯಂತಿ ಆಚರಣೆಯಲ್ಲಿ ನೋಡಲು ಒಂದಾದರೂ ಬಸವಾದಿ ಶರಣರ ಚಿತ್ರ ಕಾಣಿಸಲಿಲ್ಲ! ಬಸವಣ್ಣ ಕೇವಲ ರಾಜಕಾರಣಿಗಳಿಗೆ ಆಡೊಂಬಲವಾಗಿದೆ! ಅಣ್ಣನ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಖಾವಿ ಖಾದಿಗಳೇ ಎಲ್ಲೆಲ್ಲೂ !