ವಿಜಯಪುರ
ಡಿಸೆಂಬರ್ 29ರಂದು ಬಬಲೇಶ್ವರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸುದಿಲ್ಲವೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
“ಈ ಸಮಾವೇಶ ಮಾಡಲು ಹೊರಟಿರುವವರೆಲ್ಲರೂ ಸಚಿವ ಶಿವಾನಂದ ಪಾಟೀಲ ಮನೆಯಲ್ಲಿರುವ ಗಿರಾಕಿಗಳು. ಶಿವಾನಂದ ಪಾಟೀಲ ನಮ್ಮ ರಾಜಕೀಯ ಗುರು ಎನ್ನುವ ಗಿರಾಕಿಗಳು,” ಎಂದು ಮಾಧ್ಯಮಗಳಿಗೆ ಹೇಳಿದರು.
“ಬಬಲೇಶ್ವರದ ಸಮಾವೇಶದ ಹಿಂದಿರುವವರು ಪುಕ್ಕಟ್ಟೆ ಗಿರಾಕಿಗಳು, ಅವರೇನು ರೊಕ್ಕ ಖರ್ಚು ಮಾಡಲ್ಲ, ತಾವು ಎಂಎಲ್ಎ ಆಗಬೇಕು ಅಂತಾ ಮಾಡುತ್ತಿದ್ದಾರೆ. ಅಲ್ಲಿ ಅವು ಎಂದೂ ಎಂಎಲ್ಎ ಆಗಲ್ಲ. ಇವುಗಳನ್ನು ತೆಗೆದುಕೊಂಡು ನಾವು ಬಬಲೇಶ್ವರಕ್ಕೆ ಹೋಗುವುದಿಲ್ಲ, ” ಎಂದು ತಿಳಿಸಿದರು.
ಯತ್ನಾಳ ಸಚಿವ ಎಂ.ಬಿ. ಪಾಟೀಲರಿಗೂ ಎಚ್ಚರಿಕೆ ನೀಡಿದರು.
‘ಸಚಿವ ಎಂ.ಬಿ. ಪಾಟೀಲರು ಲಿಂಗಾಯತ, ವೀರಶೈವ ಒಡೆಯುವ ಕೆಲಸವನ್ನು ಮಾಡಬಾರದು. ಇನ್ನು ಮುಂದೆ ಹಿಂದೂ ಧರ್ಮಕ್ಕೆ ಬೈದರೆ ನಾನು ಬಬಲೇಶ್ವರದಲ್ಲಿ ಪ್ರತ್ಯಕ್ಷನಾಗುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
“ಸಚಿವ ಶಿವಾನಂದ ಪಾಟೀಲ ಮತ್ತು ಯತ್ನಾಳರ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧವಿದೆ. ಶಿವಾನಂದ ಪಾಟೀಲ ಅವರ ಸಹೋದರ ವಿಜಯಕುಮಾರ ಪಾಟೀಲ್ ಬಬಲೇಶ್ವರ ಸಮಾವೇಶದ ನೇತೃತ್ವವಹಿಸಿದ್ದಾರೆ. ಅದು ಈ ಬಿರುಕಿಗೆ ಕಾರಣವಾಗಿದೆ,” ಎಂದು ಬಸವತತ್ವ ಪ್ರಚಾರಕ ಜೆ. ಎಸ್. ಪಾಟೀಲ್ ಹೇಳಿದರು.
ವಿಜಯಕುಮಾರ ಪಾಟೀಲ್ ಬಬಲೇಶ್ವರ ಕ್ಷೇತ್ರದಲ್ಲಿ 2008, 2013, 2018, 2023ರ ಚುನಾವಣೆಗಳಲ್ಲಿ ಸತತವಾಗಿ ಎಂ. ಬಿ. ಪಾಟೀಲ್ ವಿರುದ್ಧ ಸೋತಿದ್ದಾರೆ. ಸಂಘ ಪರಿವಾರವನ್ನು ಮೆಚ್ಚಿಸಲು, ಮುಂದಿನ ಚುನಾವಣೆಯಲ್ಲಿ ಎಂ. ಬಿ. ಪಾಟೀಲ್ ಪ್ರಭಾವ ಕುಗ್ಗಿಸಲು ಕನ್ನೇರಿ ಸ್ವಾಮಿ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ, ಎಂದು ಜೆ. ಎಸ್. ಪಾಟೀಲ್ ಹೇಳಿದರು.
ಶಿವಾನಂದ ಪಾಟೀಲ್ ಮತ್ತು ಎಂ. ಬಿ. ಪಾಟೀಲ್ ನಡುವೆಯೂ ಹಳೆಯ ರಾಜಕೀಯ ವೈಷಮ್ಯವಿದೆ. ಕಾಂಗ್ರೆಸ್ ಸರಕಾರದ ಸಚಿವರಾಗಿದ್ದರೂ ಶಿವಾನಂದ ಪಾಟೀಲ್ ಕನ್ನೇರಿ ಸ್ವಾಮಿ ಮೇಲೆ ಹಾಕಿದ್ದ ನಿರ್ಬಂಧವನ್ನು ವಿರೋಧಿಸಿಸಲು ಹಿಂದುತ್ವ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದರು.
