ಬಸವನಬಾಗೇವಾಡಿ:
ತಾಲ್ಲೂಕಿನ ಮನಗೂಳಿ ಗ್ರಾಮದ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು, ಏಕಾಂತ ಸಾಧನೆ, ಅಧ್ಯಯನ, ಆರೋಗ್ಯವೃದ್ಧಿ, ಅನುಭಾವದ ಉದ್ಧೇಶಕ್ಕಾಗಿ ಅಕ್ಟೋಬರ್ 10ರಿಂದ ಮೌನಾನುಷ್ಠಾನ ವೃತ ಆರಂಭಿಸಿದ್ದಾರೆ.

ಯಶಸ್ವಿಯಾಗಿ ಪೂರೈಸಲಾದ 108 ದಿನಗಳ ಮೌನ ಅನುಷ್ಠಾನ ವೃತದ ಮಂಗಲೋತ್ಸವ ಕಾರ್ಯಕ್ರಮ ಜನೆವರಿ 24ರಂದು ಬೆಳಿಗ್ಗೆ 9ಕ್ಕೆ ಮಠದಲ್ಲಿ ನಡೆಯಲಿದೆ. ಈ ಬಗ್ಗೆ ಗ್ರಾಮದ ಶರಣ ಬಂಧುಗಳು, ಮಠದ ಭಕ್ತರು, ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಸದಸ್ಯರು 18ರಂದು ಸಭೆ ಸೇರಿ ಮಂಗಲೋತ್ಸವ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದಾರೆ.

ಮಂಗಲೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಇಲಕಲ್ಲ ವಿಜಯಮಹಾಂತೇಶ್ವರ ಮಠದ ಗುರುಮಹಾಂತಪ್ಪ ಶ್ರೀಗಳು, ಶಿರೂರು ವಿಜಯಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಅವರುಗಳು ಸಾನಿಧ್ಯ ವಹಿಸಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವನಗೌಡ ಹರನಾಳ, ಮಲ್ಲನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿರುವರು. ಸರ್ವರೂ ಭಾಗವಹಿಸಲು ಸಂಘಟಕರು ಕೋರಿದ್ದಾರೆ.


ಶ್ರೀಗಳ ಮೌನಾನುಷ್ಠಾನದ ದಿನಚರಿ: ಸದಾ ಮೌನ ಮತ್ತು ಸದಾಕಾಲ ಬಸವ ನಾಮಸ್ಮರಣೆ. ಹೊರಗಡೆ ಎಲ್ಲಿಯೂ ಹೋಗದೇ ಇರುವುದು. ಬೆಳಿಗ್ಗೆ 4 ಗಂಟೆಗೆ ಏಳುವುದು. ಶೌಚಾದಿ ಮುಗಿಸುವುದು. 5.30 ರಿಂದ 9 ಗಂಟೆವರೆಗೆ ಲಿಂಗಾರ್ಚನೆ. ನಂತರ 2 ತಾಸು ತೋಟದಲ್ಲಿ ಕಾಯಕ ಮಾಡುವುದು. 2 ಗಂಟೆಯವರೆಗೂ ಅಧ್ಯಯನ. ಮತ್ತೆ ಸ್ನಾನ ಲಿಂಗಾರ್ಚನೆ. ಮದ್ಯಾಹ್ನ 1 ತಾಸು ವಿಶ್ರಾಂತಿ. ಸಾಯಂಕಾಲ ಅಧ್ಯಯನ. ಸಂಜೆ 8 ಕ್ಕೆ ಲಿಂಗಾರ್ಚನೆ. 9 ಕ್ಕೆ ಮಲಗುವದು. ಆಹಾರವಾಗಿ ಬೆಳಿಗ್ಗೆ ಮೊಳಕೆ ಕಾಳು, ಮದ್ಯಾಹ್ನ ಹಣ್ಣು ಹಾಗೂ ತರಕಾರಿ, ಸಂಜೆ ಹಾಲು ಸೇವನೆ.

