ಬೆಂಗಳೂರು
‘ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’ ಸಂಪುಟ ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶನಿವಾರ ಲೋಕಾರ್ಪಣೆಯಾಯಿತು.
ಇದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ‘ಅಲ್ಲಮ ಪ್ರಭುದೇವರ ವಚನ-ನಿರ್ವಚನ’ ಕೃತಿಯ ಭಾಷಾಂತರ ಕೃತಿಯಾಗಿದೆ.
ಸಚಿವ ಎಂ.ಬಿ. ಪಾಟೀಲ ಮಾತನಾಡಿ ಅಲ್ಲಮಪ್ರಭುಗಳ ತತ್ವಚಿಂತನೆಗಳನ್ನು ಕನ್ನಡೇತರರಿಗೆ ಪರಿಚಯ ಮಾಡಿಕೊಡಲು ಸಿದ್ದೇಶ್ವರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಲವು ವರ್ಷಗಳ ಚಿಂತನ–ಮಂಥನ ನಡೆಯಿತು. ಅದರ ಫಲವಾಗಿ “Vachanas of Allamaprabhu” ಹೊರಬಂದಿದೆ. ಇದರೊಂದಿಗೆ ಅವರ ಮಹತ್ವಾಕಾಂಕ್ಷಿ ಸದಾಶಯ ಸಾಕಾರಗೊಂಡಿದೆ, ಎಂದು ಹೇಳಿದರು.
‘ವಚನ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ತಲುಪಬೇಕಿದೆ. ಹಲವು ಭಾಷೆಗಳಲ್ಲಿ ವಚನ ಸಾಹಿತ್ಯ ಅನುವಾದವಾಗಬೇಕಿದೆ. ಈ ನಿಟ್ಟಿನಲ್ಲಿ ಅಲ್ಲಮ ಪ್ರಭು ಅವರ ವಚನವನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶತಮಾನದ ಸಂತರೆನಿಸಿಕೊಂಡಿರುವ ಸಿದ್ದೇಶ್ವರ ಸ್ವಾಮೀಜಿ, ಅಲ್ಲಮ ಪ್ರಭು ಅವರ ವಚನಗಳ ಬಗ್ಗೆ ಅಪಾರ ಅರಿವು ಹೊಂದಿದ್ದರು. ಶೂನ್ಯ ಪೀಠದ ಬಗ್ಗೆ ವಿಶೇಷವಾದ ಜ್ಞಾನ ಅವರಲ್ಲಿತ್ತು. ಅಲ್ಲಮ ಪ್ರಭು ಎಲ್ಲಿಯೂ ನಿಲ್ಲದೇ, ಯಾವುದೇ ಪ್ರಭಾವಕ್ಕೂ ಒಳಗಾಗದೆ ದೇಶ ಸಂಚಾರ ಮಾಡಿದರು. ಇಂತಹ ವಿಶೇಷಣಗಳನ್ನು ಸಿದ್ದೇಶ್ವರ ಸ್ವಾಮೀಜಿ ಅವರಲ್ಲಿ ಕಾಣಬಹುದು’ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಒಡಿಶಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ, ಅಧ್ಯಕ್ಷ ಸಿ. ಸೋಮಶೇಖರ್, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉಪಸ್ಥಿತರಿದ್ದರು.
