ಜಮಖಂಡಿ:
ನಗರದ ಓಲೆಮಠದ ಆಶ್ರಯದಲ್ಲಿ ಏಪ್ರೀಲ್ 15 ರಿಂದ 20 ರವರೆಗೆ ಬಸವ ಜಯಂತಿ ಉತ್ಸವ ಹಾಗೂ ಓಲೆಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಓಲೆಮಠದ ಪೂಜ್ಯ ಆನಂದ ದೇವರು ಹೇಳಿದರು.
ಓಲೆಮಠದ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ವಿವಿಧ ಸಮಾಜಗಳ ಮುಖಂಡರ ಹಾಗೂ ಶ್ರೀಮಠದ ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

15 ರಿಂದ 19ರವರೆಗೆ ದಿನಕ್ಕೊಬ್ಬರಂತೆ ಒಟ್ಟು ಐದು ಜನ ಹಿರಿಯ ಚಿಂತಕರು, ಸಾಹಿತಿಗಳನ್ನು ಆಹ್ವಾನಿಸಿ ಪ್ರಮುಖ ಪೂಜ್ಯರ ಸಾನಿಧ್ಯ ಹಾಗೂ ಗಣ್ಯರ ಸಮ್ಮುಖದಲ್ಲಿ ಬಸವತತ್ವ ಮತ್ತು ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗುವುದು.
ಹಿರಿಯ ಸಾಹಿತಿ ಚಿಂತಕರನ್ನು ಆಹ್ವಾನಿಸಿ ಉಪನ್ಯಾಸ ನೀಡಿಸುವ ಜವಾಬ್ದಾರಿಯನ್ನು ಸ್ಥಳೀಯ ಬಸವ ಕೇಂದ್ರ ಮತ್ತು ಬಸವ ಸಮಿತಿ ವಹಿಸಲಿವೆ. ಪ್ರತಿದಿನದ ಮಹಾಪ್ರಸಾದ ಹಾಗೂ ಉಳಿದೆಲ್ಲ ಇತರ ಸೇವೆಗಳನ್ನು ಗಣ್ಯವ್ಯಕ್ತಿಗಳು, ವಿವಿಧ ಸಮಾಜ ಹಾಗೂ ಸಂಘ-ಸಂಸ್ಥೆಗಳು ವಹಿಸಿಕೊಳ್ಳಲಿವೆ.

20ರಂದು ಬೆಳಿಗ್ಗೆ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು. ಸಸಿಗಳು ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಬಸವ ವೃಕ್ಷೋತ್ಸವ ನಡೆಸಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಿದ್ದಾರೆ.
ಸಂಜೆ ರಥದಲ್ಲಿ ವಚನ ಕಟ್ಟುಗಳನ್ನಿಟ್ಟು ರಥೋತ್ಸವ ಓಲೆಮಠದಿಂದ ಸಾಗಲಿದೆ. ನಂತರ ವೇದಿಕೆಯ ಕಾರ್ಯಕ್ರಮ ಓಲೆಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು.
ವೇದಿಕೆ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಪೂಜ್ಯರು, ಗಣ್ಯರು, ಸಾಹಿತಿಗಳು, ಚಿಂತಕರು, ವಿದ್ವಾಂಸರು ಪಾಲ್ಗೊಳುವರು ಎಂದು ಅವರು ಮಾಹಿತಿ ನೀಡಿದರು.
