ಶಹಾಪುರ :
ವೈಚಾರಿಕತೆಯ ಚಿಂತನೆಗಳಲ್ಲಿ ತಾತ್ವಿಕ ಮತ್ತು ಸಾಮಾಜಿಕ ಆಯಾಮಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಮುಕ್ಕಣ್ಣ ಕರಿಗಾರ ಅವರು ರಚಿಸಿದ ಸಾಹಿತ್ಯದಲ್ಲಿ ಬಸವ ಪ್ರಜ್ಞೆ ಮೂಡಿಸಿದ್ದಾರೆ ಎಂದು ಹಿರಿಯ ಶರಣ ಸಾಹಿತಿ ಶಿವಣ್ಣ ಇಜೇರಿ ಹೇಳಿದರು.
ಶಹಾಪುರ ಪಟ್ಟಣದ ಶಿರವಾಳ ರಸ್ತೆಯಲ್ಲಿರುವ ಎಸ್.ಎಂ.ಸಿ. ಜೈನ್ ಬಿ.ಎಡ್. ಕಾಲೇಜಿನಲ್ಲಿ ಬೆಂಗಳೂರಿನ ಮಹಾಶೈವ ಪ್ರಕಾಶನ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಸಾಹಿತಿಗಳು, ಸಾಂಸ್ಕೃತಿಕ ಚಿಂತಕರು ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ರಚಿಸಿದ “ಮುಕ್ಕಣ್ಣ ಕಂಡ ಬಸವಣ್ಣ” ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಹಿರಿಯರಾದ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ, ಮುಕ್ಕಣ್ಣ ಕರಿಗಾರ ಅವರ ಈ ಕೃತಿಯಲ್ಲಿ ಬಸವಣ್ಣನವರ ವೈಚಾರಿಕ ಚಿಂತನೆಗಳ, ನಿಲುವುಗಳ ಕುರಿತು ಅವರ ಅನುಭವದ ಆಧಾರದ ಮೇಲೆ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ, ಆದರೆ ಇಂದಿನ ಯುವ ಸಮೂಹ ವಚನ ಸಾಹಿತ್ಯವನ್ನು ಓದಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿದ್ದರಾಮ ಹೊನಕಲ್ ಮಾತನಾಡಿ, ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ತತ್ವಗಳ ಮೂಲಕ ಅವರು ಮಾನವೀಯ ಸಮಾನತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಈ ಮುಕ್ಕಣ್ಣ ಕರಿಗಾರ ಅವರು ಕೃತಿಯಲ್ಲಿ ಓದುಗರಿಗೆ ಮತ್ತೆ ಮತ್ತೆ ನೆನಪಿಸಿದ್ದಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶಬಾನ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಮಾರಂಭದ ವೇದಿಕೆಯ ಮೇಲೆ ಹಿರಿಯ ಪತ್ರಕರ್ತರಾದ ನಾರಾಯಣಚಾರ ಸಗರ, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ, ಅಶೋಕ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಗೀತ ಪ್ರಾರ್ಥನಾ ಗೀತೆ ಹಾಡಿದರು, ಮೇಘ ಸ್ವಾಗತಿಸಿದರು, ಸಾಬಣ್ಣ ಯಾದವ್ ನಿರೂಪಿಸಿದರು, ಉಮೇಶ ಜಾಧವ ವಂದಿಸಿದರು.
