ಬೀದರ್
‘ಶರಣರಲ್ಲಿ ಗಂಡು, ಹೆಣ್ಣು ಎಂಬ ಭೇದಭಾವವಿಲ್ಲ. ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಲು ಬಂದಿದ್ದೆ ಶರಣ ಧರ್ಮ. ಬಸವ ಪೂರ್ವ ಯುಗದಲ್ಲಿ ಹೆಣ್ಣುಮಕ್ಕಳಿಗೆ ನರಕ ಸದೃಶ್ಯ ಸ್ಥಿತಿ ಇತ್ತು,’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಗುರುವಾರ ಹೇಳಿದರು.


ಬಸವ ಕೇಂದ್ರ, ಬಸವ ಸೇವಾ ಪ್ರತಿಷ್ಠಾನ, ಹಾಗೂ ಇತರ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಬಸವಣ್ಣನವರ ಎಲ್ಲ ಆಶಯಗಳ ಕಿರೀಟಪ್ರಾಯ ವೈರಾಗ್ಯನಿಧಿ ಅಕ್ಕಮಹಾದೇವಿ,’ ಎಂದು ತಿಳಿಸಿದರು.


ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಉದ್ಘಾಟಿಸಿದರು. ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ, ನಟಿ ಸುಲಕ್ಷಾ ಕೈರಾ, ಶಶಿಕಲಾ ಹಂಗರಗಿ, ಶೀಲಾವತಿ ಶೀಲವಂತ, ಜ್ಞಾನದೇವಿ ಬಬಚಡೆ, ಸುವರ್ಣಾ ಧನ್ನೂರ, ಪಾರ್ವತಿ ಸೋನಾರೆ, ವಿಜಯಶ್ರೀ ಬಶೆಟ್ಟಿ, ಶಕುಂತಲಾ ಬೆಲ್ದಾಳೆ, ಉಲ್ಲಾಸಿನಿ ಮುದಾಳೆ, ನೀತಾ ಶೈಲೇಂದ್ರ ಬೆಲ್ದಾಳೆ, ಸಂತೋಷಿ ಅರುಣ್ ಹೊತಪೇಟ್, ಸುಷ್ಮಾ, ಡಾ. ಅಂಜನಾ ವಾಲಿ, ಶಾಂತಾ ಖಂಡ್ರೆ, ಡಾ. ಕಲಾವತಿ ಬಿರಾದಾರ, ಸುನೀತಾ ದಾಡಗಿ, ಜಯದೇವಿ ಯದಲಾಪೂರೆ, ಕರುಣಾ ಶೆಟಕಾರ್, ಪಂಪಾವತಿ ಪಾಟೀಲ, ರತ್ನಾ ರಾಜಶೇಖರ ಪಾಟೀಲ, ವಿಜಯಲಕ್ಷ್ಮೀ ಕೌಟಗೆ, ನೀಲಮ್ಮ ರೂಗನ್, ದೇವಕಿ ನಾಗೂರೆ ಇದ್ದರು. ಸಕ್ಕುಬಾಯಿ ಸ್ವರಚಿತ ವಚನ ಹಾಡಿದರು. ಪ್ರತಿಭಾ ವೀರಪ್ಪ ಜೀರ್ಗೆ ಸ್ವಾಗತಿಸಿದರು.


ಭವ್ಯ ಮೆರವಣಿಗೆ
ಅಕ್ಕಮಹಾದೇವಿ ಜಯಂತಿ ಅಂಗವಾಗಿ ನಗರದಲ್ಲಿ ಗುರುವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು.
ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬೊಮ್ಮಗೊಂಡೇಶ್ವರ ವೃತ್ತ, ಹಾರೂರಗೇರಿ ಕಮಾನ್, ಮೈಲೂರ ಕ್ರಾಸ್ ಮೂಲಕ ಹಾದು ಬಿವಿಬಿ ಕಾಲೇಜಿನಲ್ಲಿ ಕೊನೆಗೊಂಡಿತು.
ಮಕ್ಕಳು ಅಕ್ಕಮಹಾದೇವಿ ಸೇರಿದಂತೆ ಶಿವಶರಣರ ಪೋಷಾಕು ಧರಿಸಿ ಗಮನ ಸೆಳೆದರು.


ವಿವಿದೆಡೆ ಆಚರಣೆ
ನಗರದ ವಿವಿಧ ಕಡೆಗಳಲ್ಲಿ ಗುರುವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಶಿವನಗರ, ಅಲ್ಲಮಪ್ರಭು ಕಾಲೊನಿ, ಗುಂಪಾ, ಕುಂಬಾರವಾಡ, ರಾಂಪೂರ ಕಾಲೊನಿ, ಹಾರೂರಗೇರಿ, ಲಾಡಗೇರಿ ಸೇರಿದಂತೆ ಹಲವೆಡೆ ಆಚರಿಸಲಾಯಿತು.
