ಬೀದರ:
ಯುವಜನರು ದುಶ್ಚಟಗಳಿಂದ ಹೊರಬಂದು ಬಸವಾದಿ ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಬೀದರ ಬಸವ ಕೇಂದ್ರದ ಬೆಳ್ಳಿ ಮಹೋತ್ಸವ ಅಂಗವಾಗಿ ತಾಲೂಕಿನ ಚಿಮಕೋಡ ಗ್ರಾಮದಲ್ಲಿ ಬಸವ ಸಂದೇಶ ಯಾತ್ರೆಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ, ಜೀವನದಲ್ಲಿ ಅಂತರಂಗ ಬಹಿರಂಗ ಒಂದಾಗಬೇಕು. ಶ್ರೀಮಂತಿಕೆ ಮುಖ್ಯವಲ್ಲ ಮನುಷ್ಯತ್ವ, ಭಾವೈಕ್ಯತೆ ಪ್ರಮುಖವಾಗಬೇಕು ಎಂದರು.
ಯುವಕರು ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆʼ ಇದು ಈ ನಾಡಿನ ಬಹುದೊಡ್ಡ ದುರಂತವೇ ಎನ್ನಬಹುದು. ಸರಾಯಿ, ತಂಬಾಕುಗಳನ್ನು ಪ್ರಾಣಿಗಳು ಮೂಸುವುದಿಲ್ಲ, ಆದರೆ ಮನುಷ್ಯರಾದ ನಾವು ಅವುಗಳನ್ನು ಸೇವಿಸುತಿದ್ದೇವೆ. ವ್ಯಸನದಿಂದ ವೈಯಕ್ತಿಕ ಬದುಕು ಜೊತೆಗೆ ಸಮಾಜ ಹಾಳಾಗುತ್ತದೆ.
ನಮ್ಮೆಲ್ಲರ ಬದುಕು ಹಸನಾಗಬೇಕಾದರೆ ಬಸವಾದಿ ಶರಣರ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು. ಇದರಿಂದ ಉತ್ತಮ ಜೀವನ ಹಾಗೂ ಸಮಾಜದಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಯುವ ಬಸವ ಕೇಂದ್ರದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಮಾತನಾಡಿ, ʼಬಸವಣ್ಣನವರ ಸಂದೇಶ ಎಲ್ಲ ಕಾಲಕ್ಕೂ ಬೇಕಾದುದು, ಅವರ ತತ್ವಸಿದ್ಧಾಂತ ಕಳೆದ 25 ವರ್ಷಗಳಿಂದ ಬಸವ ಕೇಂದ್ರವು ಧಾರ್ಮಿಕ, ಸಾಹಿತ್ಯಿಕ, ವೈಚಾರಿಕ, ಸಾಂಸ್ಕೃತಿಕ ಚಟುವಟಿಕೆಗಳ ಮುಖಾಂತರ ಇಡೀ ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ.
ಇಂದು ಕೇಂದ್ರ 25 ವಸಂತಗಳು ಪೂರೈಸಿರುವ ಹಿನ್ನಲೆಯಲ್ಲಿ ʼಭವ್ಯ ಭಾರತದ ಬಸವಣ್ಣʼ ಪ್ರವಚನ ಹಾಗೂ ಹಳ್ಳಿಗಳಲ್ಲಿ ʼಬಸವ ಸಂದೇಶ ಯಾತ್ರೆʼ ಕೈಗೊಂಡು ಕೊನೆಗೆ ಮೂರು ದಿವಸಗಳ ಕಾಲ ʼಶರಣ ಸಂಸ್ಕೃತಿ ಉತ್ಸವʼ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಇದಕ್ಕೂ ಮುಂಚೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ ಮುಖಾಂತರ ಪೂಜ್ಯರನ್ನು ಅತ್ಯಂತ ವೈಭವದಿಂದ ಭವ್ಯ ಮೆರವಣಿಗೆ ಮುಖಾಂತರ ಅರ್ಥಪೂರ್ಣವಾಗಿ ಹಾಗೂ ಅಷ್ಟೇ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಬಸವ ಕೇಂದ್ರದ ಅಧ್ಯಕ್ಷ ಸೋಮನಾಥ ಕಂದಗೂಳೆ ಸೇರಿದಂತೆ ಪ್ರಮುಖರಾದ ಶ್ರೀಕಾಂತ ಬಿರಾದಾರ, ನಾಗರಾಜ ಕರಪೂರ, ವೀರಶೆಟ್ಟಿ ಪಾಟೀಲ ಮರಖಲ, ವೆಂಕಟರಾವ ಬಿರಾದಾರ, ಆನಂದ ವಿಜಯಕುಮಾರ, ನಾಗಶೆಟ್ಟಿ ಬಿರಾದಾರ, ಸಂಜೀವ ಸಾಗರ, ರಘುನಾಥ ಬಿರಾದಾರ, ರವಿ ಚಿನ್ನಪ್ಪನ್ನೊರ,, ನಾಗಶೆಟ್ಟಿ ಸಿದ್ರಾಮಪ್ಪ, ಸೂರ್ಯಕಾಂತ ಪಾಟೀಲ, ಶಿವಕುಮಾರ ಟೊಳ್ಳೆ, ಮಲ್ಲಶೆಟ್ಟಿ ಢೆಂಪೆ, ನಾಗಶೆಟ್ಟಿ ಪೋಲೀಸಪಾಟೀಲ, ಚಂದ್ರಕಾಂತ ಚಿನ್ನಪ್ಪನ್ನೊರ, ಶಾಂತಕುಮಾರ ಅಬ್ಬೆಂದೆ, ಮಾರುತಿ ಶಿವಪುರೆ, ಮಲ್ಲಿಕಾರ್ಜುನ, ಮಾರುತಿ ಟೊಲ್ಲೆ ಉಪಸ್ಥಿತರಿದ್ದರು.
ಪರಮೇಶ್ವರ ಢೆಂಪೆ, ನಿರೂಪಿಸಿದರು. ಉಮೇಶ ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಚೆನ್ನಪ್ಪನ್ನೋರ ವಂದಿಸಿದರು. ಸಂಜೀವಕುಮಾರ ಗಡ್ಡೆ ದಾಸೋಹಗೈದರು.
