ಪುಣೆ
ಶರಣ ತತ್ವ ಚಿಂತಕ ಹರಿಹರ ಶಿವಕುಮಾರ ಅವರ ‘ಅನನ್ಯ ಅಲ್ಲಮ’ ವಚನ ಸಾಹಿತ್ಯದ ಮೌಲ್ಯಗಳ ಚರ್ಚೆಗೆ ಅವಕಾಶ ಮಾಡಿಕೊಡುವ, ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಕೃತಿ.
ಈ ಕೃತಿಯಲ್ಲಿ ಲೇಖಕರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ನಿರ್ವಚನ ಮಾಡಿದ್ದಾರೆ.
ಅಲ್ಲಮರ ವಚನಗಳು ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಅವರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳನ್ನು ಅರ್ಥೈಸುವ ಪ್ರಯತ್ನ ಈ ಕೃತಿಯಲ್ಲಿದೆ.
ಲೇಖಕರು ವಚನಗಳನ್ನು ಪದ ಅರ್ಥ, ವಚನಾರ್ಥ, ಪದಪ್ರಯೋಗಾರ್ಥ ಎಂದು ಮೂರು ಭಾಗಗಳಲ್ಲಿ ವಿಶ್ಲೇಷಿಸಿದ್ದಾರೆ. ವಚನಗಳ ವಾಚಾರ್ಥ, ಗೂಢಾರ್ಥ, ಲಕ್ಷಾರ್ಥಗಳ ಕಡೆಗೆ ಗಮನ ಕೊಟ್ಟಿರುವುದು ವಿಶೇಷ.
ವಚನಗಳನ್ನು ಸಾಂದರ್ಭಿಕವಾಗಿ ಅರ್ಥೈಸುವ ಇವರ ಶೈಲಿ ತುಂಬಾ ಚೆನ್ನಾಗಿದೆ. ವಚನಗಳ ಅರ್ಥಗಳ ವಿವರಣೆ ಇನ್ನಷ್ಟು ವಿಸ್ತರಣೆಗೊಂಡಿದ್ದರೆ ಇವರ ಪ್ರಯತ್ನ ಇನ್ನೂ ಉಪಯುಕ್ತವಾಗುತ್ತಿತ್ತು.
ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶಿವಕುಮಾರ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವರು. ಇವರು ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವ್ಯಕ್ತಿ.
ಲೇಖಕ: ಹರಿಹರ ಶಿವಕುಮಾರ
ಪ್ರಕಾಶಕ: ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್
ಬೆಲೆ 180 ರೂಪಾಯಿ
ವರ್ಷ 2026
