(ಕೊಪ್ಪಳದಲ್ಲಿ ನಡೆಯುತ್ತಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರ ‘ಬಸವ ಭಾಷೆ ‘ಪ್ರವಚನದ ಮುಖ್ಯಾಂಶಗಳು)
ದಿನಾಂಕ : 10.04.2026
ಪ್ರವಚನಕಾರರು
ಶ್ರೀ ಪ್ರಭುದೇವ ಮಹಾಸ್ವಾಮಿಗಳು,
ಲಿಂಗಾಯತ ಮಹಾಮಠ,
ಬಸವಗಿರಿ, ಬೀದರ
ಸಂಘಟಕರು
ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸಮಿತಿ, ಕೊಪ್ಪಳ
ಕೊಪ್ಪಳ :
ಬೇಡುವುದು ಭಕ್ತಿ ಅಲ್ಲ. ಯಾವನು ಬೇಡುತ್ತಾನೋ ಅವನು ನಿಜವಾದ ಭಕ್ತನಲ್ಲ. ಯಾವನು ನೀಡುತ್ತಾನೋ ಅವನೇ ನಿಜವಾದ ಭಕ್ತ. ಶರಣರು ಯಾರಿಗೂ ಕೈಚಾಚಿ ಬೇಡುವವರಲ್ಲ. ಅವರು ದೇವರಿಗೂ ಬೇಡಿಕೊಳ್ಳುವುದಿಲ್ಲ. ಅವರು ಸ್ವತಂತ್ರವಾಗಿ, ಧೈರ್ಯದಿಂದ ಬದುಕುವವರು. ಆಸೆ ಇರುವುದರಿಂದ ದುಃಖಕ್ಕೆ ಕಾರಣವಾಗುತ್ತದೆ. ಆಸೆ ಇದ್ದರೆ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗುತ್ತೇವೆ. ಆದರೆ ಆಸೆ ಬಿಡಿಸಿದರೆ ಭಯವೂ ಕಡಿಮೆಯಾಗುತ್ತದೆ, ಮನಸ್ಸು ಮುಕ್ತವಾಗುತ್ತದೆ.
ಕಷ್ಟಗಳು ಬಂದಾಗ ಜನರು ಭಯಪಟ್ಟು ದೇವರನ್ನು ಬೇಡಿಕೊಳ್ಳುತ್ತಾರೆ. ಈ ದುರ್ಬಲತೆಯಿಂದಲೇ ಮೂಢನಂಬಿಕೆಗಳು ಹುಟ್ಟುತ್ತವೆ. ಕೆಲವರು ದೇವರ ಹೆಸರಿನಲ್ಲಿ ಕೆಟ್ಟ ಕೆಲಸಗಳನ್ನೂ ಮಾಡುತ್ತಾರೆ. ಆದರೆ ಬಸವಣ್ಣನವರು ಹೇಳಿದ್ದು, ಕಷ್ಟ ಬಂದಾಗ ಬೇಡಿಕೊಳ್ಳಬೇಡಿ, ಬದಲಿಗೆ ಅದನ್ನು ಧೈರ್ಯದಿಂದ ಎದುರಿಸಬೇಕು. ಪ್ರತಿ ಮಾನವನಲ್ಲೂ ಶಕ್ತಿ ಇದೆ. ಆತ್ಮವಿಶ್ವಾಸ ಇದೆ. ಅದನ್ನು ಜಾಗೃತವಾಗಿಟ್ಟುಕೊಳ್ಳಬೇಕು.ಅದನ್ನು ಬಳಸಿಕೊಂಡು ಮುಂದೆ ಹೋಗಬೇಕು. ದೇವರ ಜೊತೆ “ನೀ ಕೊಡು, ನಾನು ಬೇಡುತ್ತೇನೆ” ಎಂಬ ವ್ಯವಹಾರ ಮಾಡುವುದು ತಪ್ಪು. ಇದು ಭಕ್ತಿ ಅಲ್ಲ, ವ್ಯವಹಾರ.

ನಿಜವಾದ ಶರಣರು ಏನನ್ನೂ ಬೇಡೋದಿಲ್ಲ. ಯಾರಿಗೂ ಹಂಗಾಗೋದಿಲ್ಲ. ಸ್ವತಂತ್ರವಾಗಿ ಬದುಕುತ್ತಾರೆ. “ನನಗೆ ದೇವನಿಂದ ಏನೂ ಬೇಡ, ಮಾನವರಿಂದಲೂ ಏನೂ ಬೇಡ.” ಈ ರೀತಿಯ ಬದುಕು ನಮಗೆ ಒಳಗಿನ ಶಕ್ತಿ ಹೆಚ್ಚಿಸುತ್ತದೆ. ಆತ್ಮಬಲವನ್ನು ಹೆಚ್ಚಿಸುತ್ತದೆ. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದುವೇ ಬಸವಣ್ಣನವರು ಬೋಧಿಸಿರುವ ದೇವನಿಗೂ ಬೇಡದ ಭಾಷೆ.

ಶರಣು ಶರಣಾರ್ಥಿಗಳು 🙏🙏🌺