ಬೆಂಗಳೂರು
‘ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ವಚನಗಳಿಗೆ ಅಗ್ರಸ್ಥಾನವಿದೆ. ತಾಳೆಗರಿ ಮತ್ತು ಹಸ್ತಪ್ರತಿಗಳಲ್ಲಿ ಉಳಿದಿದ್ದ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಕನ್ನಡಿಗರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಫ.ಗು.ಹಳಕಟ್ಟಿ ಅವರ ಸೇವೆ ಸ್ಮರಣೀಯ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕನ್ನಡ ಮುದ್ರಣಾಲಯಗಳ ಇತಿಹಾಸ ಸಂಶೋಧನಾ ಕೇಂದ್ರವು ಹೊರತಂದಿರುವ ಫ.ಗು.ಹಳಕಟ್ಟಿ ಅವರ ಕುರಿತಾದ ‘ಮುದ್ರಣ ಗುಮ್ಮಟ’ ಕೃತಿಯನ್ನು ಶುಕ್ರವಾರ ಜನಾರ್ಪಣೆ ಮಾಡಿ ಅವರು ಮಾತನಾಡಿದರು. ‘ಹಳಕಟ್ಟಿಯವರ ತ್ಯಾಗ ಮತ್ತು ಸಾಹಿತ್ಯ ಸೇವೆಯನ್ನು ಕೃತಿ ಸಮಗ್ರವಾಗಿ ದಾಖಲಿಸಿದೆ’ ಎಂದರು.
‘ವಚನಗಳನ್ನು ಸಂಗ್ರಹಿಸಿದ್ದು ಮಾತ್ರವಲ್ಲ. ಹಳಕಟ್ಟಿ ಅವರು, ಅವುಗಳನ್ನು ಅಚ್ಚುಕಟ್ಟಾಗಿ ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸಿದರು. ಅದಕ್ಕಾಗಿ ಮುದ್ರಣ ಯಂತ್ರವನ್ನು ಖರೀದಿಸಲು ತಮ್ಮ ಮನೆಯನ್ನೇ ಮಾರಾಟ ಮಾಡಿದ್ದರು. ಬಸವನಾಡಿಗೆ ಮುದ್ರಣ ಯಂತ್ರವನ್ನು ಪರಿಚಯಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ’ ಎಂದರು.
ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಆರ್.ಜನಾರ್ದನ್, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ ಉಪಸ್ಥಿತರಿದ್ದರು.
