ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ ಅತ್ತಿವೇರಿ
ಸ್ಥಳ: ಬಸವ ಮಂಟಪ, ಮಾಕಾ ಲೇಔಟ್, ಕಲಬುರಗಿ
ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ
ದಿನಾಂಕ: 19 ಏಪ್ರಿಲ್ 2026
ಇಂದಿನ ಪ್ರವಚನದಲ್ಲಿ ಪ್ರವಚನಕಾರರು ಬಸವಣ್ಣನವರ ತತ್ವ-ಸಿದ್ಧಾಂತಗಳ ಮಹತ್ವವನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿದರು.
ಸೃಷ್ಟಿಯ ನಿಯಮದಲ್ಲಿ ಅಡಗಿರುವ ಸತ್ಯವನ್ನು ಅರಿಯುವ ಮಾರ್ಗವನ್ನು ಮಾನವಕುಲಕ್ಕೆ ತೋರಿಸಿದವರು ಬಸವಣ್ಣನವರು ಎಂದು ಅವರು ಹೇಳಿದರು. ಲಿಂಗಾಯತ ಧರ್ಮವು ಕೇವಲ ಸನ್ಯಾಸಿಗಳಿಗಲ್ಲ, ಸಂಸಾರಿಕರಿಗೂ ಸಮಾನವಾಗಿ ಅನ್ವಯಿಸುವ ಜೀವನ ಮಾರ್ಗವಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾನವನು ಸತ್ಯದ ಮಾರ್ಗದಲ್ಲಿ ಸಾಗುವಾಗ ಅಷ್ಟಮಧಗಳು, ಅರಿಷಡ್ವರ್ಗಗಳು, ಮಾಯೆ ಹಾಗೂ ತಾಪತ್ರಯಗಳು ಸೇರಿದಂತೆ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗುರುವಿನ ಅನುಗ್ರಹ ಪಡೆದು ಆತ್ಮೋನ್ನತಿಯತ್ತ ಸಾಗಬೇಕು ಎಂದು ಶರಣರ ವಚನಗಳನ್ನು ಉಲ್ಲೇಖಿಸಿ ತಿಳಿಸಿದರು.

ಬುದ್ಧನ ಸತ್ಯಾನ್ವೇಷಣೆಯ ಉದಾಹರಣೆಯನ್ನು ನೀಡುತ್ತಾ, ಅನುಭವ ಮಂಟಪವು ಜಗತ್ತಿನ ವಿವಿಧ ಭಾಗಗಳಿಂದ ಬಂದ ಶರಣ-ಶರಣೆಯರ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಿತ್ತು. ಸತ್ಯದ ಅನ್ವೇಷಣೆಯೇ ಮಾನವ ಜೀವನದ ಪರಮ ಗುರಿ ಎಂದು ಒತ್ತಿ ಹೇಳಿದರು.
ಅಂಬಿಗರ ಚೌಡಯ್ಯ ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ, ಮಾನವನು ಭೌತಿಕ ಆಕರ್ಷಣೆಗಳಿಗೆ ಒಳಗಾಗದೆ ಜೀವನದ ಸಾರ್ಥಕತೆಯನ್ನು ಅರಿತುಕೊಳ್ಳಬೇಕು ಮತ್ತು ಕಾಲವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.
ದೇವರು ಸೃಷ್ಟಿಸಿದ ಮೂರು ವಿಧದ ಜೀವಾತ್ಮಗಳ ಕುರಿತು ವಿವರಿಸುತ್ತಾ, ಉರಿಲಿಂಗ ಪೆದ್ದಿ ಎಂಬ ಕಳ್ಳನೊಬ್ಬ ಶರಣ ದಾರ್ಶನಿಕನಾಗಿ ರೂಪಾಂತರಗೊಂಡ ಘಟನೆಯನ್ನು ಉದಾಹರಿಸಿ, ಬಸವತತ್ವದ ಪರಿವರ್ತನಾತ್ಮಕ ಶಕ್ತಿಯನ್ನು ವಿವರಿಸಿದರು.
