ಬಸವ ಜಯಂತಿ ದಿನದಂದು ಎತ್ತುಗಳ ಉತ್ಸವ ಸಲ್ಲದು : ಡಾ. ಸತೀಶ ಇಟಗಿ

ನಾಲತವಾಡ:

ವಿಶ್ವಗುರು ಬಸವಣ್ಣನವರ ಜಯಂತಿ ದಿನದಂದು ಎತ್ತು ಮತ್ತು ರಾಸುಗಳ ಪೂಜೆ, ಮೆರವಣಿಗೆ, ಉತ್ಸವ ಅಸಂಬದ್ಧವಾಗಿದೆ ಎಂದು ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ಸತೀಶ್ ಕೆ. ಇಟಗಿ ಹೇಳಿದರು. ಅವರು ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ 893ನೆ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.

ಪುರಾಣಗಳ ಪ್ರಭಾವದಿಂದ ಬಸವ ಎಂದರೆ ನಂದಿ, ಎತ್ತು ಎಂದು ಪಂಚಪೀಠಗಳು ಬಿಂಬಿಸಿದ್ದರ ಪರಿಣಾಮವಾಗಿ ಮುಗ್ಧ ರೈತಾಪಿ ವರ್ಗ ಬಸವ ಜಯಂತಿಯಂದು ಎತ್ತುಗಳ ಉತ್ಸವ ಮಾಡುತ್ತಿರುವುದು ನಿಲ್ಲಬೇಕು. ಅವರಲ್ಲಿ  ವೈಚಾರಿಕತೆಯ ಪ್ರಜ್ಞೆ ಬೆಳೆಸಿ, ನಿಜವಾದ ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯನ್ನು ಆಚರಿಸಲು ಪ್ರೆರೇಪಿಸಬೇಕೆಂದು  ಹೇಳಿದರು.

ಕರ್ನಾಟಕದ ಗಾಂಧಿಯೆಂದೇ ಜನಪ್ರಿಯರಾದ ಹರ್ಡೇಕರ್ ಮಂಜಪ್ಪನವರ ಪರಿಶ್ರಮದ ಫಲವಾಗಿ ಕ್ರಿ. ಶ. 1913 ರಿಂದ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಸಾರ್ವಜನಿಕ ಬಸವ ಜಯಂತಿ ಆಚರಣೆಯನ್ನು ಜಾರಿಗೊಳಿಸಲಾಯಿತು. ಈಗದು ಭಾರತದ ಐದು ರಾಜ್ಯಗಳಲ್ಲಿ ಸೇರಿದಂತೆ ವಿದೇಶಗಳಲ್ಲೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಹೀಗಾಗಿ ಬಸವಣ್ಣನವರ ಭಾವಚಿತ್ರ ಮೆರವಣಿಗೆ, ವಚನ ಗಾಯನ, ವಚನ ಗೋಷ್ಠಿ, ನೃತ್ಯ ರೂಪಕ, ಉಪನ್ಯಾಸ ಕಾರ್ಯಕ್ರಮ, ದಾಸೋಹಗಳ ಮೂಲಕ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಎ.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಫ. ಗು. ಹಳಕಟ್ಟಿ ಹಾಗೂ ಉತ್ತಂಗಿ ಚನ್ನಪ್ಪ ಅವರ ಪರಿಶ್ರಮದಿಂದ ಸಹಸ್ರಾರು ವಚನಗಳು ಶೋಧನೆಯಾಗಿದ್ದು, ಅವುಗಳನ್ನು ಓದಿ, ಅರಿತುಕೊಳ್ಳುವ ಕಾರ್ಯ ತಳಮಟ್ಟದಿಂದ ಜರುಗಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಶಾಲಾ ಬಾಲಕಿಯರಿಂದ ವಚನ ನೃತ್ಯ ರೂಪಕ ಜರುಗಿತು. ಇಮಾಮಸಾಬ್ ಅತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾರಾಷ್ಟ್ರ ರಾಜ್ಯದ ಮಾಜಿ ಶಾಸಕಿಯರಾದ ನಂದಿನಿ ದೇಶಮುಖ ವೇದಿಕೆ ಮೇಲೆ ಆಸೀನರಾಗಿದ್ದರು. ಪಟ್ಟಣದ ಗಣ್ಯರಾದ ನಾನಾಸಾಹೇಬ ದೇಶಮುಖ, ಶಂಕರರಾವ ದೇಶಮುಖ, ಬಸವರಾಜ ತಾಳಿಕೋಟೆ, ಎ. ಜಿ. ಗಂಗನಗೌಡರ, ಚಂದ್ರಶೇಖರ ಮೇಟಿ ಉಪಸ್ಥಿತರಿದ್ದರು. ಮಹಾಂತೇಶ ನೂಲಿನವರ ಸ್ವಾಗತಿಸಿ, ಪರಿಚಯಿಸಿದರು. ರಾಜೀವ ಹಾದಿಮನಿ ನಿರೂಪಿಸಿದರು. ಜಗದೀಶ ಸಜ್ಜನ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *