ಕಾಡಸಿದ್ದೇಶ್ವರರ ವಚನದ ಮೂಲಕವೇ ಕನ್ನೇರಿ ಸ್ವಾಮಿಗೆ ಉತ್ತರ
ಗದಗ
ಬಸವಾದಿ ಶರಣರ ಹೆಸರ ಹಿಂದುತ್ವ ಸಮ್ಮೇಳನಕ್ಕೆ ಪ್ರತಿರೋಧವಾಗಿ ಮೇ 30ರಂದು ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದಲ್ಲಿ ವಚನಗಳ ಹಾಗೂ ಸಂವಿಧಾನದ ಪೂರ್ವಪೀಠಿಕೆಗಳ ಸಾಮೂಹಿಕ ಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
‘ಸಮಾನತೆಗಾಗಿ ನಾವು’ ವೇದಿಕೆ ವತಿಯಿಂದ ನಡೆಯಲಿರುವ ‘ವಚನ ಅರಿವಿನ ಮಹಾಯಾನ’ದಲ್ಲಿ ಐದು ನೂರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಮುಖಂಡ ಪರಶು ಕಾಳೆ ಹೇಳಿದರು.
ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಸಂಘ ಪರಿವಾರದ ಹಿಂದುತ್ವ ಸಮ್ಮೇಳನ ಮೇ 31 ನಗರದಲ್ಲಿ ನಡೆಯಲಿದೆ.
ಸಮಾನತೆ, ಸಹೋದರತ್ವ ಸಾರುವ ವಚನಗಳನ್ನು ತಿರುಚುವ, ಶರಣರ ಕುರಿತು ಅಪಪ್ರಚಾರ ಮಾಡುವ ಪ್ರಯತ್ನವು ಮನುವಾದಿ, ವೈದಿಕ ಸಂಘಟನೆಗಳಿಂದ ನಡೆಯುತ್ತಿದೆ.

ಸಾಮೂಹಿಕವಾಗಿ ವಚನ ಪಠಣದ ಮುಖಾಂತರ ಜನತೆಗೆ ವಚನಗಳ ನಿಜಾರ್ಥ ತಿಳಿಸಲಾಗುವುದು. ಜಿಲ್ಲೆಯ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ‘ಸಮಾನತೆಗಾಗಿ ನಾವು’ ಮುಖಂಡರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು..
ಕಾಡಸಿದ್ದೇಶ್ವರರ ವಚನ ಹೇಳುವ ಮೂಲಕ ಕಾರ್ಯಕ್ರಮ ಆರಂಭಿಸಬೇಕೆನ್ನುವ ವಿಚಾರವಿದೆ. ವೇದ, ಆಗಮ, ಪುರಾಣ, ಅಸಮಾನತೆಯ ವರ್ಣವ್ಯವಸ್ಥೆ, ಮೌಢ್ಯ, ಕಂದಾಚಾರದ ವಿರುದ್ಧ ಬಸವಾದಿ ಶರಣರು ಬರೆದಿರುವ ವಚನಗಳನ್ನು ಹಾಡುತ್ತೇವೆ, ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಶೋಕ ಬರಗುಂಡಿ ಹೇಳಿದರು.
ಕರುಣೆ, ಸಮತೆ, ಪ್ರೀತಿಯ ಕುರಿತು, ಮತ್ತಿತರ ಆದರ್ಶಗಳ ಕುರಿತು ಶರಣರು ಹೇಳಿದ ವಚನಗಳ ಗಾಯನ, ಪಠಣವೂ ಇರುತ್ತವೆ ಎಂದು ಬಸವದಳದ ವಿ.ಕೆ. ಕರೇಗೌಡ್ರ ಹೇಳಿದರು.
ವಚನಗಳು ಕತ್ತಲು ಬೆಳಕಿನ ಮಹಾ ಅರಿವು. ಬೆಳಕಿನ ದೊಂದಿ ಹಿಡಿದು ಕತ್ತಲಲ್ಲಿದ್ದವರಿಗೆ ಒಂದಿಷ್ಟಾದರೂ ಬೆಳಕಿನ ಸಹಾಯವಾಗಲಿ ಎಂಬುದು ನಮ್ಮ ಆಶಯ, ಎಂದು ಸಮಾನತೆಗಾಗಿ ನಾವು ಸಂಘಟನೆಯ ಬಸವರಾಜ ಸೂಳಿಭಾವಿ ಹೇಳಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವದಳ, ಬಸವ ಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ದಲಿತ ಸಂಘಟನೆಗಳ ಒಕ್ಕೂಟ, ದಲಿತ ಕಲಾ ಮಂಡಳಿ, ಮೇ ಸಾಹಿತ್ಯ ಬಳಗ, ಮತ್ತಿತರ ಪ್ರಗತಿಪರ ಸಂಘಟನೆಗಳ ಭಾಗವಹಿಸಲಿವೆ.
