ಬಸವನಬಾಗೇವಾಡಿ:
ಮುಂಬರುವ ಶ್ರಾವಣ ಮಾಸದ ಅಂಗವಾಗಿ ಜಗದ್ಗುರು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಆಯೋಜಿಸಲಾಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯ ಶರಣಬಸವ ದೇವರು ಅವರನ್ನು ಭಕ್ತಿಪೂರ್ವಕವಾಗಿ ಆಹ್ವಾನಿಸಲಾಯಿತು.
ಶ್ರೀ ಬಸವೇಶ್ವರ ಸೇವಾ ಸಮಿತಿಯ ಪದಾಧಿಕಾರಿಗಳು ಪೂಜ್ಯರ ಸನ್ನಿಧಿಗೆ ತೆರಳಿ, ಸನ್ಮಾನಿಸಿ ಶ್ರಾವಣ ಮಾಸದ ಮಂಗಲ ಪ್ರವಚನ ನಡೆಸಿಕೊಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, “ಬಸವನಬಾಗೇವಾಡಿಯಲ್ಲಿ ನಿರಂತರವಾಗಿ ಬಸವ ತತ್ವಾಧಾರಿತ ಪ್ರವಚನಗಳು ಯಶಸ್ವಿಯಾಗಿ ನಡೆಯುತ್ತಿವೆ. ನಾಡಿನ ಹೆಸರಾಂತ ಪ್ರವಚನಕಾರರು ಆಗಮಿಸಿ ಜ್ಞಾನದಾಸೋಹ ಉಣಬಡಿಸಿದ್ದಾರೆ. ಮುಂಬರುವ ಶ್ರಾವಣ ಮಾಸದಲ್ಲಿ ತಾವು ಸಹ ಆಗಮಿಸಿ ಸದ್ಭಕ್ತರನ್ನು ಹರಸಬೇಕು” ಎಂದು ಮನವಿ ಮಾಡಿದರು.
ಆಹ್ವಾನವನ್ನು ಸ್ವೀಕರಿಸಿದ ಪೂಜ್ಯ ಶರಣಬಸವ ದೇವರು ಮಾತನಾಡಿ, “ಜಗದ್ಗುರು ಬಸವೇಶ್ವರರ ಜನ್ಮಸ್ಥಳದಲ್ಲಿ ಪ್ರವಚನ ನೀಡುವುದು ನನ್ನ ಪುಣ್ಯ. ಲಿಂಗಾಯತರಿಗೆ ಬಸವನಬಾಗೇವಾಡಿ ಅತ್ಯಂತ ಪವಿತ್ರ ಭೂಮಿ” ಎಂದು ಹರ್ಷ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಖಂಡಿತವಾಗಿ ಆಗಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಬಸವರಾಜ ಹಾರಿವಾಳ ಸೇರಿದಂತೆ ಶಂಕರಗೌಡ ಬಿರಾದಾರ, ಎಂ.ಜಿ. ಆದಿಗೊಂಡ, ಶೇಖರ ಗೊಳಸಂಗಿ, ಉಮೇಶ ಹಾರಿವಾಳ, ಸುರೇಶಗೌಡ ಪಾಟೀಲ, ಬಸವರಾಜ ಕೋಟಿ, ಸಂಕನಗೌಡ ಪಾಟೀಲ, ಶೇಖರಗೌಡ ಪಾಟೀಲ, ರವಿ ರಾಠೋಡ, ರಮೇಶ ಯಲಮೇಲಿ, ರವಿ ಚಿಕ್ಕೊಂಡ ಹಾಗೂ ಬಸನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
