ಜೂನ್ 28 ಬೆಳಗ್ಗೆ 10 ಗಂಟೆಗೆ ಬಸವಪರ ಸಂಘಟನೆಗಳಿಂದ ಬಸವಕಲ್ಯಾಣದ ಮುಖ್ಯದ್ವಾರದ ಎದುರು ಪ್ರತಿಭಟನಾ ರ್ಯಾಲಿ
ಕಲಬುರಗಿ
ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಕೋಮುದ್ವೇಷ ಹುಟ್ಟು ಹಾಕುತ್ತಿರುವ ಕನ್ನೇರಿ ಸ್ವಾಮಿಗೆ ಬಸವಕಲ್ಯಾಣಕ್ಕೆ ಪ್ರವೇಶ ನೀಡಬಾರದು ಎಂದು ಆಗ್ರಹಿಸಿ ಜೂನ್ 28 ಬೆಳಗ್ಗೆ 10 ಗಂಟೆಗೆ ಬಸವಕಲ್ಯಾಣದ ಮುಖ್ಯದ್ವಾರದ ಎದುರುಗಡೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದರು.
ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ್ಯೂ, ಬಸವಾದಿ ಶರಣರ ಬದುಕು ಹಾಗೂ ಬೋಧನೆಯನ್ನು ವೈದಕೀಕರಣಗೊಳಿಸಿ ಬಸವತತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದು, ಇವರನ್ನು ಬಸವಕಲ್ಯಾಣ ಪ್ರವೇಶಿಸದಂತೆ ಸೂಕ್ತಕ್ರಮ ವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಇಡೀ ನಾಡನ್ನು ಕೋಮುವಾದಿಕರಣಗೊಳಿಸುತ್ತಿದ್ದಾರಲ್ಲದೆ ಬಸವತತ್ವ ಅನುಸರಿಸುವ ಸ್ವಾಮೀಜಿಗಳಿಗೆ ಬಸವ ತಾಲಿಬಾನ್ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಕೂಡ ಅವರಿಗೆ ಛೀಮಾರಿ ಹಾಕಿದೆ ಎಂದು ತಿಳಿಸಿದರು.
ಈಗಲೂ ಸಹ ಹಳೆ ಚಾಳಿ ಮತ್ತೆ ಮುಂದುವರೆಸಿದ್ದು, ಬಸವಣ್ಣನವರ ವಚನಗಳನ್ನು ಅರ್ಧಮರ್ಧ ಬಳಸಿಕೊಂಡು ತಪ್ಪುತಪ್ಪಾಗಿ ಅರ್ಥೈಸುವ ಚಾಲಾಕಿತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ನೇರಿ ಸ್ವಾಮೀಜಿ ಬಸವಕಲ್ಯಾಣ ಪ್ರವೇಶಿಸದಂತೆ ಈಗಾಗಲೇ ಬೀದರನಲ್ಲಿ ಜೂನ್ 7ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಜೂನ್ 14ರಂದು ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಬಸವಪರ ಸಂಘಟನೆಗಳು ಹಾಗೂ ನಾಡಿನ ಪ್ರಗತಿಪರ ಮಠಾಧೀಶರು ಸೇರಿ ಪೂರ್ವಭಾವಿ ಸಭೆ ಸೇರಿ ಕನ್ನೇರಿ ಸ್ವಾಮೀಜಿ ಪುರಪ್ರವೇಶಿಸದಂತೆ ತಡೆಯುವ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಅಶೋಕ ಘೂಳಿ, ಹಣಮಂತರಾಯ ಪಾಟೀಲ, ನಂದು ಪಾಟೀಲ, ಬಸಣ್ಣ ಎಂ.ಗುಣಾರಿ, ಶಿವಶರಣಪ್ಪ ದೇಗಾಂವ ಮತ್ತಿತರರಿದ್ದರು.


ಅತ್ಯವಶ್ಯವಾಗಿದ್ದ ಸೂಕ್ತ ನಿರ್ಧಾರ. ಧರ್ಮದ ಅಳಿವು ಉಳಿವಿನ ಪ್ರಶ್ನೆ ನಮ್ಮ ಮುಂದಿದೆ. ಧರ್ಮದ ಉಳಿವಿಗಾಗಿ ಎಲ್ಲಾ ತರಹದ ತ್ಯಾಗಕ್ಕೂ ಸಿದ್ಧಾವಾಗಿರಬೇಕು.
ಹೌದು ಶರಣರೇ ತುಂಬ ಅವಶ್ಯ ಆಗಿದೆ, ಈಗ ಕನೇರಿ ಸ್ವಾಮಿಗೆ ಬಸವಕಲ್ಯಾಣ ಪ್ರವೇಶಕೆ ಅವಕಾಶ ಕೊಡಬಾರದು , ಎಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶಿಸಿ ಪ್ರತಿಭಟನೆ ಮಾಡಬೇಕು