ಬೀದರ:
ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದೆ. ಧರ್ಮದ ಜಾಗೃತಿಗಾಗಿ ಮಠಾಧೀಶರ ಒಕ್ಕೂಟದಿಂದ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡ ಪೂಜ್ಯರನ್ನು, ಬಸವ ಸಂಘಟನೆಗಳ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೀಯಾಳಿಸಿ ಬಸವ ತಾಲಿಬಾನ ಎಂದು ಕರೆದ ಕಾಡಸಿದ್ದೇಶ್ವರ ಕನ್ನೇರಿ ಸ್ವಾಮಿಗಳ ಪೂರ್ವಾಗ್ರಹ ಪೀಡಿತವಾದ ನಿಲುವು ಹೊಂದಿದ್ದಾರೆಂದು ಬಸವ ಕೇಂದ್ರ ಖಂಡಿಸಿದೆ.
ಈ ಕುರಿತು ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಯುವ ಬಸವ ಕೇಂದ್ರ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷರಾದ ಪ್ರಭುರಾವ ವಸತೆ ಹಾಗೂ ಮಹಿಳಾ ಬಸವ ಕೇಂದ್ರದ ಅಧ್ಯಕ್ಷರಾದ ಡಾ. ವಿದ್ಯಾವತಿ ಬಲ್ಲೂರ ಪ್ರಕಟಣೆ ನೀಡಿ ವಿರೋಧಿಸಿದ್ದಾರೆ.
ದೇಶದ ಸುಪ್ರೀಂಕೋರ್ಟ್ ಸಹ ಛೀಮಾರಿ ಹಾಕಿದರೂ ಬಾಯಿ ಚಪಲತೆಯಿಂದ ತಮ್ಮ ನಾಲಿಗೆ ಹರಿಬಿಡುತ್ತ ಸಾಗಿರುವುದು ದೇಶದ ಬಸವ ಭಕ್ತರಿಗೆ ಎಲ್ಲಿಲ್ಲದ ನೋವಾಗಿದೆ ಎಂದಿದ್ದಾರೆ.
ಅಂಥ ಪರಿಸ್ಥಿತಿಯಲ್ಲಿ ಪುನಃ ಜೂನ್ 28ಕ್ಕೆ ಬಸವಕಲ್ಯಾಣದಲ್ಲಿ ಕನ್ನೇರಿ ಸ್ವಾಮಿಗಳ ನೇತೃತ್ವದ ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶಕ್ಕೆ ತಯಾರಿ ನಡೆಸಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ.
ಜಿಲ್ಲೆಯ ಬಸವ ಸಂಘಟನೆಗಳ ಸದಸ್ಯರು, ಬಸವಭಕ್ತರು ಎಚ್ಚೆತ್ತುಕೊಂಡು ಸಂಘಟಿತರಾಗಿ ಸದರಿ ಸಮಾವೇಶವನ್ನು ಬಹಿಷ್ಕರಿಸುವುದರೊಂದಿಗೆ ಬಸವತತ್ವ ಸಿದ್ಧಾಂತಕ್ಕೆ ಚ್ಯುತಿ ಬಂದಾಗ ಬೀದಿಗಿಳಿದು ಪ್ರತಿಭಟಿಸಲು ಸಿದ್ಧರಾಗಬೇಕೆಂದು ಜಿಲ್ಲಾ ಬಸವ ಕೇಂದ್ರ ಮನವಿ ಮಾಡಿಕೊಂಡಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
