ಬಸವಕಲ್ಯಾಣ:
ವಿಶ್ವಬಸವಧರ್ಮ ಟ್ರಸ್ಟ್, ಅನುಭವ ಮಂಟಪ ವತಿಯಿಂದ ಪೂಜ್ಯ ಡಾ. ಬಸವಲಿಂಗ ಪಟ್ಟದೇವರ ಸಾನಿಧ್ಯದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಡಾ. ಬಸವಲಿಂಗ ಪಟ್ಟದೇವರು ಮಾತನಾಡುತ್ತ, ಡಾ. ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ರಕ್ಷಣೆಗಾಗಿ ಬಹುದೊಡ್ಡ ತ್ಯಾಗ ಪರಿಶ್ರಮ ಮಾಡಿದ್ದಾರೆ. ಅವರ ನಿರಂತರ ಪರಿಶ್ರಮ, ಸಮರ್ಪಣೆ, ತ್ಯಾಗದಿಂದಲೆ ಇಂದು ನಮಗೆ ವಚನ ಸಾಹಿತ್ಯ ದೊರತಿದೆ.
ವಚನಗಳ ಸಂಗ್ರಹ ಮಾಡಿ ಅದನ್ನು ಪ್ರಕಟಿಸಲು ಹಳಕಟ್ಟಿಯವರು ಅವರ ಸ್ವಂತ ಮನೆಯನ್ನು ಮಾರಾಟ ಮಾಡಿದರು. ಇದನ್ನು ನೆನಸಿಕೊಂಡರೆ ಮೈ ರೊಮಾಂಚನವಾಗುತ್ತದೆ. ಕೌಟಂಬಿಕ ಜೀವನದಲ್ಲಿ ಅನೇಕ ಕಷ್ಟ-ನೋವುಗಳು ಅನುಭವಿಸಿದರೂ ವಚನ ಸಾಹಿತ್ಯ ಪ್ರಕಟಣಾ ಕಾರ್ಯ ನಿಲಿಸಲ್ಲಿಲ್ಲ.

ಅವರು 1926ರಲ್ಲಿ ಶಿವಾನುಭವ ಪತ್ರಿಕೆ ಪ್ರಾರಂಭಿಸಿ ಆ ಮೂಲಕ ಶರಣ ಪರಂಪರೆ, ವಚನ ಸಾಹಿತ್ಯ ಉಳಿವಿಗೆ ನಾಂದಿ ಹಾಡಿದರು. ಹಳಕಟ್ಟಿಯವರು ಶಿವಾನುಭವ ಪತ್ರಿಕೆಯ ಜನ್ಮ ಶತಮಾನೋತ್ಸವ ವರ್ಷ ಸಮಸ್ತ ಕನ್ನಡಿಗರು ಹಾಗೂ ಬಸವಾಭಿಮಾನಿಗಳು ನಾಡಿನ ತುಂಬ ವಚನ ಸಾಹಿತ್ಯ ಪ್ರಸಾರ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದೇವರು ನೇತೃತ್ವ ವಹಿಸಿದ್ದರು. ಡಾ. ಎಸ್.ಬಿ. ದುರ್ಗೆ, ಜಗನ್ನಾಥ ಪತಂಗೆ, ರಾಜು ಜುಬರೆ, ಶಂಕರ ಕೌಟೆ, ದತ್ತಾತ್ರಿ ಬಾಂದೆಕರ್, ಶಿವರಾಜ ನೀಲಕಂಠ, ದತ್ತು ಮೂಲಗೆ, ಸಚಿನ್ ಕೌಟೆ, ಸರಸ್ವತಿ ಪಾಟೀಲ, ಸೋನಾಲಿ ನೀಲಕಂಠ ಮತ್ತಿತರರಿದ್ದರು.
