ಯಲಬುರ್ಗಾ:
12ನೇ ಶತಮಾನದ ಬಸವಾದಿ ಶರಣರು ಸಮಾಜದಲ್ಲಿನ ಅಸಮಾನತೆ, ಮೌಡ್ಯ, ಕಂದಾಚಾರ ತೊಲಗಿಸಲು ವಚನ ಸಾಹಿತ್ಯದ ಮೂಲಕ ಕ್ರಾಂತಿ ಮಾಡಿದರು. ಕಾಯಕದಲ್ಲಿ ದೇವರನ್ನು ಕಾಣಬೇಕೆಂದು ಶರಣರು ಸಾರಿ ಹೇಳಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ಬೇಲೂರು- ಬದಾಮಿ ಗುರುಬಸವೇಶ್ವರಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಮರಕಟ್ಟ ಗ್ರಾಮದಲ್ಲಿ ನಡೆದ ವಚನ ಚಿಂತನ ಹಾಗೂ ಲಿಂಗೈಕ್ಯ ಶರಣ ಚಿದಾನಂದಪ್ಪ ಬಳ್ಳಾರಿ ಅವರ 35ನೇ ಸ್ಮರಣೆ ಮತ್ತು ಮಲ್ಲಿನಾಥ ಶರಣರ ಸ್ಮರಣಾರ್ಥ 209ನೇ ಮಾಸಿಕ ಸಂಚಾರಿ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರು ಜೀವನದಲ್ಲಿ ನಡೆನುಡಿ ಶುದ್ಧವಾಗಿಟ್ಟುಕೊಂಡು ಶಿವನಾಮ ಸ್ಮರಣೆಯಲ್ಲಿ ತೊಡಗಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶುದ್ಧವಿಲ್ಲದ ನಾಲಿಗೆ, ಸಮಾಜಕ್ಕೆ ಕೇಡು ಮಾಡುವ ವ್ಯಕ್ತಿಗಳು ಕೇವಲ ಭಗವಂತನ ನಾಮಸ್ಮರಣೆ ಮಾಡಿದರೆ ಮುಕ್ತಿ ಸಿಗುವುದಿಲ್ಲ. ನಿತ್ಯ ಜೀವನದಲ್ಲಿ ಕೆಟ್ಟ ನಡೆ ನುಡಿಗಳಲ್ಲಿಯೇ ತೊಡಗಿಕೊಂಡು ಜತೆ ಜತೆಗೆ ಶಿವನಾಮ ಸ್ಮರಣೆ ಮಾಡಿದ ಮಾತ್ರಕ್ಕೆ ಒಳ್ಳೆಯವರಾಗುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

ವೇದಮೂರ್ತಿ ಶಿವನಾಗಯ್ಯ ಹಿರೇಮಠ, ಅಮರೇಶ ಗಡಿಹಳ್ಳಿ, ಡಾ. ಶಿವಲಿಂಗಪ್ರಭು ಲಿಂಗದಳ್ಳಿ, ಅಮರೇಶಪ್ಪ ಬಳ್ಳಾರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಂಕ್ರಪ್ಪ ವನಗಡ್ಡಿ, ಹನುಮಗೌಡ ಬಳ್ಳಾರಿ, ಬಸವರಾಜ ಇಂಗಳದಾಳ, ನಿತ್ಯಾ ನಂದಗೌಡ್ರ, ನಾಗನಗೌಡ ಜಾಲಿಹಾಳ, ರೇಣುಕಪ್ಪ ಮಂತ್ರಿ, ವೀರಬಸಪ್ಪ ಹುಣಸಿಹಾಳ, ಶಂಕರಗೌಡ ಪಾಟೀಲ, ಶಿವಲಿಂಗಪ್ಪ ಹುಚನೂರು, ದುಂಡಪ್ಪ ಕೊಳಜಿ, ಬಾಲಪ್ಪ ಕರುವಿನ, ದೇವಪ್ಪ ಕೋಳೂರ, ಶ್ರೀಕಾಂತಗೌಡ ಮಾಲಿಪಾಟೀಲ, ಹನುಮಂತಪ್ಪ ಹುಣಸಿಹಾಳ ಸೇರಿದಂತೆ ಮತ್ತಿತರರು ಇದ್ದರು. ಗ್ರಾಮದ ಬಸವಭಕ್ತರು, ಜನತೆ ಉಪಸ್ಥಿತರಿದ್ದರು.
