ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 5
ಕಲಬುರಗಿ
ಚಾಮರಸ ಕೇವಲ ಒಬ್ಬ ಕವಿಯಲ್ಲ. ನೂರೊಂದು ಜನ ವಿರಕ್ತರಲ್ಲಿ ಒಬ್ಬ ಪರಮ ವಿರಾಗಿ, ಜೊತೆಗೆ ಜ್ಞಾನಿ, ಅನುಭಾವಿ. ಅಲ್ಲಮರನ್ನು ವೈರಾಗ್ಯಪಥದ ಮಹಾಬೆಳಕು ಮಾಡಿಕೊಂಡವರು.
ಪ್ರಭುಗಳ ಲೀಲಾಮಯ ಚರಿತ್ರೆಯನ್ನು ಬಹು ಸುಂದರವಾಗಿ, ತಾತ್ವಿಕವಾಗಿ ಅರ್ಥಪೂರ್ಣವಾಗಿ, ಕೇಳುಗರು ನಿತ್ಯಾನಂದದಲ್ಲಿ ನಿಬ್ಬೆರಗಾಗಿ ಮೈಮರೆವಂತೆ ಪ್ರಭುಲಿಂಗಲೀಲೆ ರಚಿಸಿದ್ದಾನೆ.
ಕುರಿಗಳೋಪಾದಿಯಲಿ ಕಬ್ಬಿನ | ಹೊರಗಣೆಲೆಯನೆ ಮೇದಕಟ ಮೆಲ |
ಕಿರಿವುತಲ್ಪಸುಖಕ್ಕೆ ಸೋಲದೆ ಕಬ್ಬಿನೊಳುರಸವ
|| ನೆರೆ ಸವಿವ ಗಜದಂತೆ ಭಕ್ತಿಯ | ತೆರನ ತಿಳಿದಾಚರಿಸಬೇಕೆಂದರಿವವರು
ಲಾಲಿಸುವುದೀ ಪ್ರಭುಲಿಂಗಲೀಲೆಯನು
ಸಾಕಾರ ನಿರಾಕಾರದೊಳಗೆ ನಿರವಯಂಗನಾಗಿ ಸುಳಿದು… ಎನ್ನುವ ವಚನದಲ್ಲಿ ಬಸವಣ್ಣನವರು ಸಾಕಾರ-ನಿರಾಕಾರಗಳಲ್ಲಿ ಜಂಗಮವಾಗಿ ನೆಲೆಸಿ, ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಶಿವನ ಲೀಲೆಯನ್ನು ಈ ವಚನದಲ್ಲಿ ವರ್ಣಿಸಿದ್ದಾರೆ. ಶಿವನ ನಿರವಯಂಗ ರೂಪದ ಮಹತ್ವ ಮತ್ತು ಭಕ್ತರ ಮೇಲಿನ ಅನುಗ್ರಹವನ್ನು ಕವಿಯು ಇಲ್ಲಿ ಕೊಂಡಾಡಿದ್ದಾರೆ.
ಲೌಕಿಕ ಜಗತ್ತಿನ ಮಾನವರು ಹೊಟ್ಟೆ ಎಂದು ಬಡಿದಾಟ, ಹೋರಾಟ ಮಾಡಿದರೆ ಹೊಟ್ಟೆ ಎಂಬುದನ್ನು ಮೆಟ್ಟಿ ನಿಂತ ಶರಣರ ಚರಿತೆ ಆಷಾಢಭೂತಿಗಳಿಗೆ, ಅಜ್ಞಾನಿಗಳಿಗೆ ಅಲ್ಲ. ಸತ್ಯ ಶರಣರು ತಿಳಿವುದೀ ಪ್ರಭುಲಿಂಗಲೀಲೆ ಎಂದು ಚಾಮರಸ ಕವಿ ಹೇಳಿದ್ದಾನೆ.
“ಮಾಡುವಾತ ನಾನಲ್ಲಯ್ಯಾ
ನೀಡುವಾತ ನಾನಲ್ಲಯ್ಯಾ
ಬೇಡುವಾತ ನಾನಲ್ಲಯ್ಯಾ
ನಿಮ್ಮ ಕಾರುಣ್ಯವಲ್ಲದೆ. ಎಲೆ ದೇವಾ ಮನೆಯ ತೊತ್ತು ಅಲಸಿದಡೆ ಒಡತಿ ಮಾಡಿಕೊಂಬಂತೆ ನಿನಗೆ ನೀ ಮಾಡಿಕೊ ಕೂಡಲಸಂಗಮದೇವಾ”
ಈ ವಚನವು ಸಂಪೂರ್ಣ ಶರಣಾಗತಿಯ ಮತ್ತು ನಿಷ್ಕಾಮ ಕರ್ಮದ ತತ್ತ್ವವನ್ನು ಸಾರುತ್ತದೆ. ಮನುಷ್ಯನಿಗೆ ಅಹಂಕಾರ ಸಲ್ಲದು; ಎಲ್ಲದಕ್ಕೂ ಭಗವಂತನ ಕೃಪೆಯೇ ಕಾರಣ ಎಂಬುದನ್ನು ಹೇಳಿಕೊಡುತ್ತದೆ.
ಚಾಮರಸರು ಅಲ್ಲಮರ ವೈರಾಗ್ಯ ಸತ್ಯವನ್ನು ಹೇಳುತ್ತ ಪರುಷದಂಗವ… ಎನ್ನುವ ಸಾಲುಗಳ ಮೂಲಕ ಅಲ್ಲಮರ ತತ್ವಕ್ಕೆ ತಲೆಬಾಗಿ, ಶರಣಾಗತರಾದಾಗ ಮಾತ್ರ ಅಲ್ಲಮನ ಸಾನ್ನಿಧ್ಯ ದೊರೆಯಲಿದೆ. ಆಗ ನಮ್ಮ ಗತಿಯೂ ಬದಲಾಗಲಿದೆ ಎಂದು ಗುಹೇಶ್ವರನ ಲೀಲೆಯನ್ನು ವಿವರಿಸುತ್ತಾರೆ.
