ಆಗಸ್ಟ್ 12 ರಿಂದ ಶ್ರಾವಣ ಮಾಸದ ಪ್ರವಚನ
ಭಾಲ್ಕಿ:
2026ನೇ ಸಾಲಿನ ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆಯಾಗಿ ನಗರದ ನಿವಾಸಿ ಶ್ರೀಮಠದ ಪರಮಭಕ್ತರು ಆಗಿರುವ ಸ್ವರೂಪಾ ಬಂಡೆಪ್ಪ ಬಳತೆ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಚನ್ನಬಸವಾಶ್ರಮ ಪರಿಸರದಲ್ಲಿ ಮಂಗಳವಾರ ನಡೆದ ಶ್ರಾವಣ ಮಾಸದ ಪೂರ್ವಭಾವಿ ಸಭೆಯಲ್ಲಿ ಸ್ವರೂಪಾ ಬಂಡೆಪ್ಪ ಬಳತೆ ಅವರನ್ನು ಈ ಬಾರಿಯ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವುದಾಗಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.
ನಂತರ ಪೂಜ್ಯರು ಅವರನ್ನು ಸತ್ಕರಿಸಿ, ನಗರದಲ್ಲಿ ಪ್ರತಿವರ್ಷದಂತೆ ಈ ಬಾರಿಯು ಶ್ರಾವಣ ಮಾಸದ ಪ್ರವಚನ ಹಮ್ಮಿಕೊಳ್ಳಲಾಗಿದೆ.
ಕಳೆದ ನಾಲ್ಕು ದಶಕಗಳಿಂದ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅವರು ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ಪ್ರವಚನದ ಮೂಲಕ ವಿವಿಧ ಶರಣರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.
ಈ ಬಾರಿಯು ನಗರದ ಚನ್ನಬಸವಾಶ್ರಮ ಪರಿಸರದಲ್ಲಿ ಬರುವ ಆಗಸ್ಟ್ 12ರಿಂದ ಪೂಜ್ಯರಿಂದ ತಿಂಗಳ ಪರ್ಯಂತ ಪ್ರವಚನದ ಮೂಲಕ ಜ್ಞಾನ ದಾಸೋಹ ನಡೆಯಲಿದೆ.
ಹಾಗಾಗಿ ನಗರ ಸೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜ್ಯರ ಅಮೃತ ವಾಣಿಯನ್ನು ಆಲಿಸಿ ತಮ್ಮ ಬದುಕಿನಲ್ಲಿ ಆಲಿಸಿ ತಮ್ಮ ಜೀವನ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ರಾಜು ಜುಬರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಜೀವಿ ವಿಶ್ವನಾಥಪ್ಪ ಬಿರಾದಾರ, ನಿವೃತ್ತ ಪ್ರಾಚಾರ್ಯ ಮಲ್ಲಮ್ಮ ಆರ್. ಪಾಟೀಲ, ಶ್ರಾವಣ ಮಾಸ ಪ್ರವಚನದ ನಿಕಟ ಪೂರ್ವ ಅಧ್ಯಕ್ಷ ಗುಂಡಪ್ಪ ಸಂಗಮಕರ ಸೇರಿದಂತೆ ಹಲವರು ಇದ್ದರು.
