ಬಸವಶಕ್ತಿ ಶಿಬಿರಗಳಿಗೆ ಇಂದು ಹೊಸಪೇಟೆಯಲ್ಲಿ ಹುರುಪಿನ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಎರಡು ದಿನದ ಗೋಷ್ಠಿಯಲ್ಲಿ ಲಿಂಗಾಯತ ಧರ್ಮ, ಸಮಾಜದ ಮುಂದಿರುವ ಏಳು ವಿಷಯಗಳ ಗಂಭೀರ ಚರ್ಚೆ

ಬೆಂಗಳೂರು

ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಎರಡು ದಿನದ ಶಿಬಿರಗಳಿಗೆ ಇಂದು ಹೊಸಪೇಟೆಯಲ್ಲಿ ಚಾಲನೆ ದೊರೆಯಲಿದೆ.

ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ ಸಮಾಜ, ಧರ್ಮದ ಮುಂದಿರುವ ಸವಾಲುಗಳ ಹಾಗೂ ರಾಜ್ಯಾದ್ಯಂತ ಸಕ್ರಿಯವಾಗಿರುವ ಬಸವ ಸಂಘಟನೆಗಳ ರಾಜಕೀಯ ಪ್ರಭಾವ ಹಾಗು ಪ್ರಜ್ಞೆಯ ಬಗ್ಗೆ ಎರಡು ದಿನಗಳ ಗಂಭೀರ ಚರ್ಚೆ ನಡೆಯಲಿದೆ.

ವಚನ, ಸಂವಿಧಾನ ಪೀಠಿಕೆ ಪಠಣದಿಂದ ಶುರುವಾಗುವ ಕಾರ್ಯಕ್ರಮದಲ್ಲಿ ಡಾ. ಕೆ ರವೀಂದ್ರನಾಥ್ ಸ್ವಾಗತ ಭಾಷಣ ಮಾಡಿದರೆ, ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ.ಆರ್. ಚಂದ್ರಶೇಖರ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಸವ ಶಕ್ತಿ ಶಿಬಿರಗಳ ಉದ್ದೇಶ ಮತ್ತು ಸ್ವರೂಪ ತಿಳಿಸಲಿದ್ದಾರೆ.

ನಂತರ ನಡೆಯುವ ಚರ್ಚಾಗೋಷ್ಠಿಗಳಲ್ಲಿ ಏಳು ವಿಷಯಗಳನ್ನು ಚರ್ಚಿಸಲಾಗುವುದು:

ವಿಷಯ 1: ಲಿಂಗಾಯತದ ಮೇಲೆ ಸಾಂಸ್ಕೃತಿಕ, ರಾಜಕೀಯ ಆಕ್ರಮಣ

ಬಸವ ಶಕ್ತಿ ಕಾರ್ಯಕ್ರಮ ಒಂದು ಸಂಘರ್ಷದ ಹಿನ್ನಲೆಯಲ್ಲಿ ನಡೆಯುತ್ತಿದೆ.

2022ರ ನಂತರ ಈ ಸಂಘರ್ಷ ತೀವ್ರವಾಗಿದೆ. ಲಿಂಗಾಯತ ಸಮಾಜ, ಧರ್ಮ ನಿರಂತರವಾಗಿ ಒಂದಲ್ಲ ಒಂದು ರೀತಿಯ ದಾಳಿಗಳನ್ನು ಎದುರಿಸುತ್ತಿದೆ.

ಈ ಸಂಘರ್ಷದ ಸ್ವರೂಪ, ಕಾರಣ, ಪರಿಹಾರಗಳ ಬಗ್ಗೆ ನಾವು ಚಿಂತಿಸಬೇಕಾಗಿದೆ.

ಡಾ. ಸಂಗಮೇಶ ಕಲಹಾಳ ವಿಷಯದ ಪರಿಚಯ ಮಾಡಿಕೊಡಲಿದ್ದಾರೆ. ಅಶೋಕ ಬರಗುಂಡಿ ಚರ್ಚೆಯನ್ನು ವಿಸ್ತರಿಸಲಿದ್ದಾರೆ.

ವಿಷಯ 2: ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ, ಪ್ರಜ್ಞೆ ಬೇಕೇ?

ಬಸವ ಶಕ್ತಿ ಕಾರ್ಯಕ್ರಮದ ಮೂಲ ಉದ್ದೇಶ ಬಸವ ಸಂಘಟನೆಗಳ ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸುವುದು.

ಬಸವ ಮೀಡಿಯಾ ಸಮೀಕ್ಷೆಯಲ್ಲಿ ರಾಜಕೀಯ ಪ್ರಜ್ಞೆ ಎಂದರೆ ಏನು, ಬಸವ ಸಂಘಟನೆಗಳಿಗೆ ರಾಜಕೀಯ ಬೇಕೇ ಎನ್ನುವುದು ಸಾಮಾನ್ಯವಾಗಿ ಬಂದ ಪ್ರಶ್ನೆಗಳು.

ಈ ವಿಷಯವನ್ನು ಅಕ್ಕಿ ಮಲ್ಲಿಕಾರ್ಜುನ ಪರಿಚಯ ಮಾಡಿಕೊಡಲಿದ್ದಾರೆ. ನಂತರ ಡಾ. ರಾಜಶೇಖರ ನಾರನಾಳ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 3: ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವುದು ಹೇಗೆ?

ಇಂದು ಲಿಂಗಾಯತ ಧರ್ಮ, ಸಮಾಜದ ವಿರುದ್ಧವಾಗಿ ಯಾವುದೇ ಬೆಳವಣಿಗೆ ನಡೆದರೂ ಬಸವ ಸಂಘಟನೆಗಳಿಂದ ತೀಕ್ಷ್ಣ ಪ್ರತಿಕ್ರಿಯೆ ಬರುತ್ತಿದೆ.

ಅಲ್ಲಲ್ಲಿ ಮನವಿ ಪತ್ರ, ಸುದ್ದಿಗೋಷ್ಠಿ, ಕೋರ್ಟ್ ಕೇಸ್, ಸಣ್ಣ ಸಣ್ಣ ಪ್ರತಿಭಟನೆ ಮುಂತಾದ ಚಟುವಟಿಕೆಗಳು ನಡೆಯುತ್ತಿವೆ.

ಇವೆಷ್ಟು ಪರಿಣಾಮಕಾರಿಯಾಗಿವೆ? ಸರಕಾರ, ರಾಜಕಾರಣಿಗಳ ಮೇಲೆ ಒತ್ತಡ ತರುವ ಕೆಲಸ ಇನ್ನೂ ವ್ಯವಸ್ಥಿತವಾಗಿ ಮಾಡಬಹುದೇ?

ಈ ವಿಷಯದ ಬಗ್ಗೆ ಮಲ್ಲಮ್ಮ ಯಳವಾರ ಅವರು ತಮ್ಮ ಹೋರಾಟದ ಅನುಭವ ಹಂಚಿಕೊಳ್ಳಲಿದ್ದಾರೆ.

ನಂತರ ಬಸವರಾಜ ಟಿ ಎಚ್ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 4: ಬಸವ ಸಂಘಟನೆಗಳು ಚುನಾವಣೆಗಳಲ್ಲಿ ಸಕ್ರಿಯವಾಗುವುದು ಹೇಗೆ?

ಇಂದು ಲಿಂಗಾಯತ ಧರ್ಮಕ್ಕೆ ರಾಜಕೀಯ ವಿರೋಧವಿದೆ. ಲಿಂಗಾಯತ ಮತಗಳಿಂದ ಗೆದ್ದ ಲಿಂಗಾಯತ ರಾಜಕಾರಣಿಗಳನ್ನೇ ಲಿಂಗಾಯತರ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ.

ಇದನ್ನು ತಡೆಯಬೇಕಾದರೆ ಬಸವ ಸಂಘಟನೆಗಳು ಕೂಡ ಚುನಾವಣೆಯಲ್ಲಿ ಸಕ್ರಿಯವಾಗಿ ಒಂದಷ್ಟು ಮತಗಳ ಬಗ್ಗೆ ಪ್ರಭಾವ ಬೀರುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೇ?

2023ರ ಚುನಾವಣೆಯಲ್ಲಿ ಎದ್ದೇಳು ಕರ್ನಾಟಕ ಪ್ರಗತಿಪರ ಸಂಘಟನೆಗಳಿಗೆ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಬಗ್ಗೆ ತರಭೇತಿ ನೀಡಿತು. ಅದೇ ರೀತಿ ಚುನಾವಣೆ ಎದುರಿಸಲು ನಾವೂ ಕೂಡ ಸಿದ್ಧರಾಗಬೇಕೇ?

ಈ ವಿಷಯದ ಬಗ್ಗೆ ಬಸವಲಿಂಗಪ್ಪ ಬಾದರ್ಲಿ ಪೀಠಿಕೆ ಮಂಡಿಸಲಿದ್ದಾರೆ. ನಂತರ ಎಸ್. ಬಸವರಾಜ ಮಾವಿನಹಳ್ಳಿ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 5: ಲಿಂಗಾಯತ ಧರ್ಮದ ಬಗ್ಗೆ ಅಭಿಪ್ರಾಯ ರೂಪಿಸುವುದು ಹೇಗೆ?

ಯಾವುದೇ ಹೋರಾಟಕ್ಕೆ ಜನಬೆಂಬಲ ಬೇಕಾದರೆ ಅದರ ವಿಚಾರಧಾರೆಯನ್ನು ಜನರಿಗೆ ಮನಮುಟ್ಟುವ ಹಾಗೆ ನಿರೂಪಿಸಬೇಕು. ಜನರ ಅಭಿಪ್ರಾಯವನ್ನು ರೂಪಿಸುವ ಬಹಳ ಮುಖ್ಯ ಹಂತವಿದು.

ಜನಸಾಮಾನ್ಯರಿಗೆ ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟವನ್ನು ಹೇಗೆ ವಿವರಿಸಬೇಕು? ನಮ್ಮ ಚಳುವಳಿಯನ್ನು ಚುನಾವಣೆಗಳ ಮೇಲೆ ಪ್ರಭಾವ ಬೀರುವಂತೆ ಬೆಳೆಸಬಹುದೇ?

ಈ ವಿಷಯದ ಬಗ್ಗೆ ಡಾ. ಅಕ್ಕಿ ಬಸವೇಶ ಪೀಠಿಕೆ ಹಾಕಲಿದ್ದಾರೆ. ನಂತರ ಪಿ ರುದ್ರಪ್ಪ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 6: ನಾಡು, ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ

ಸ್ವಾತಂತ್ರ್ಯ, ಏಕೀಕರಣ ಚಳುವಳಿಗಳಲ್ಲಿ ಲಿಂಗಾಯತ ಸಮುದಾಯ ಮಹತ್ವದ ಕೊಡುಗೆ ನೀಡಿದೆ. ಅದೇ ಮೇಲ್ಪಂಕ್ತಿಯನ್ನು ಇಂದು ನಾವು ಅನುಸರಿಸಬೇಕು. ಬಸವ ಸಂಘಟನೆಗಳು ಸಮುದಾಯದ ವಿಷಯಗಳಿಗೆ ಸೀಮಿತವಾಗಬಾರದು.

ನಾಡು, ನುಡಿಯ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು.

ಈ ವಿಷಯದ ಬಗ್ಗೆ ಡಾ. ‌ನಂದೀಶ್ವರ ದಂಡೆ ನಿಮಿಷ ಪೀಠಿಕೆ ಮಂಡಿಸಲಿದ್ದಾರೆ. ನಂತರ ಎಸ್ ವೈ ಗುರುಶಾಂತಪ್ಪ ಅದನ್ನು ವಿಸ್ತರಿಸಲಿದ್ದಾರೆ.

ವಿಷಯ 7: ಅನುಭವ ಮಂಟಪ ಜಾಗೃತಿ ಶಿಬಿರ

ಮುಂದಿನ ವರ್ಷ ನೂತನ ಅನುಭವ ಮಂಟಪ ಲೋಕಾರ್ಪಣೆಯಾಗಲಿದೆ. ಅದರ ನಿರ್ವಹಣೆ ಹಾಗೂ ಸಂರಕ್ಷಣೆಗೆ ರಾಜ್ಯಾದ್ಯಂತ ಸ್ವಯಂಸೇವಕರ ಪಡೆ ಕಟ್ಟುವ ಅಗತ್ಯವಿದೆ.

ಡಾ ಎಚ್ ಎಂ ಸೋಮಶೇಖರಪ್ಪ ಹಾಗೂ ಡಾ ಎಸ್ ಶಿವಾನಂದ ಮೊದಲ ಅನುಭವ ಮಂಟಪ ಜಾಗೃತಿ ಶಿಬಿರ ನಡೆಸಿಕೊಡಲಿದ್ದಾರೆ.

ಅನುಭವ ಮಂಟಪ ಜಾಗೃತಿ ಶಿಬಿರಗಳು ಬಸವ ಶಕ್ತಿ ಕಾರ್ಯಕ್ರಮದ ಜೊತೆಗೆ ಶುರುವಾಗುತ್ತಿವೆ. ನಂತರ ಅವುಗಳು ಪ್ರತ್ಯೇಕವಾಗಿ ರಾಜ್ಯಾದ್ಯಂತ ವಿಸ್ತಾರವಾಗುತ್ತವೆ.

ಜಾಗತಿಕ ಲಿಂಗಾಯತ ಮಹಾಸಭಾ, ಅರಿವು ಆಚಾರ ಅನುಭಾವ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್, ಬಸವ ಬಳಗ, ರಾಷ್ಟ್ರೀಯ ಬಸವದಳ ಮುಂತಾದ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಎರಡು ದಿನಗಳ ಶಿಬಿರವನ್ನು ಆಯೋಜಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *