ಹೊಸಪೇಟೆ
ನಗರದಲ್ಲಿ ಜೂಲೈ 25, 26 ನಡೆದ ಬಸವ ಶಕ್ತಿ ಶಿಬಿರದ ಅಂಗವಾಗಿ ಮೊದಲ ಅನುಭವ ಮಂಟಪ ಜಾಗೃತಿ ಶಿಬಿರ ಕೂಡ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ಅನುಭವ ಮಂಟಪ ಸಲಹಾ ಸಮಿತಿ ಸದಸ್ಯ ಅಶೋಕ ಬರಗುಂಡಿ ಮುಂದಿನ ವರ್ಷ ಲೋಕಾರ್ಪಣೆಯಾಗುತ್ತಿರುವ ಐತಿಹಾಸಿಕ ಕಟ್ಟಡವನ್ನು ಪರಿಚಯ ಮಾಡಿಕೊಟ್ಟರು.
12ನೇ ಶತಮಾನದ ನಂತರ ಮತ್ತೆ ಜೀವತಾಳುತ್ತಿರುವ ಅನುಭವ ಮಂಟಪದ ನಿರ್ವಹಣೆಯ ಜವಾಬ್ದಾರಿಯನ್ನು ಸರಕಾರದ ಮೇಲೆ ಬಿಡದೆ ಸಿಖ್ಖರು ಸುವರ್ಣಮಂದಿರ ನಿರ್ವಹಿಸುತ್ತಿರುವ ಮಾದರಿಯಲ್ಲಿ ನಾವೂ ಸಂಘಟಿತರಾಗಿ ಶ್ರಮದಾನ ಮಾಡಬೇಕೆಂದು ಹೇಳಿದರು.
ಇದರ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಊರುಗಳಲ್ಲಿ ಅನುಭವ ಮಂಟಪ ಜಾಗೃತಿ ಶಿಬಿರಗಳು ನಡೆಯಬೇಕೆಂದು ಕರೆ ಕೊಟ್ಟರು.

ನಿವೃತ ಪ್ರಾಧ್ಯಾಪಕ ರವೀಂದ್ರನಾಥ್ ಕೆ ಅನುಭವ ಮಂಟಪದ ಚಾರಿತ್ರಿಕ ಹಿನ್ನಲೆ ವಿವರಿಸಿದರು. ಅನುಭವ ಮಂಟಪಕ್ಕೆ 12ನೇ ಶತಮಾನದಲ್ಲಿಯೇ ಆತಂಕವಿತ್ತು. ಕಲ್ಯಾಣ ಕ್ರಾಂತಿಯ ನಂತರ ಸ್ಥಗಿತಗೊಂಡ ಅನುಭವ ಮಂಟಪವನ್ನು ತೋಂಟದ ಸಿದ್ದಲಿಂಗ ಯತಿಗಳು ಪುನರುತ್ಥಾನಗೊಳಿಸಿದರು, ಅದಕ್ಕೆ ಅವರನ್ನು ದ್ವಿತೀಯ ಅಲ್ಲಮ ಎಂದು ಕರೆಯಲಾಗುತ್ತದೆ ಎಂದು ಹೇಳಿದರು
ಬಸವತತ್ವ ಚಿಂತಕ ಎಸ್ ಶಿವಾನಂದ ನೂತನ ಅನುಭವ ಮಂಟಪದ ನಿರ್ವಹಣೆ ಜೊತೆಗೆ ರಕ್ಷಣೆಗೂ ಬಸವ ಕಾರ್ಯಕರ್ತರ ದೊಡ್ಡ ಪಡೆ ಸಿದ್ಧವಾಗಬೇಕೆಂದು ಹೇಳಿದರು.
ಹಳ್ಳಿ ಹಳ್ಳಿಗಳಲ್ಲಿ ಅನುಭವ ಮಂಟಪ ಜಾಗೃತಿ ಶಿಬಿರ ನಡೆಯಬೇಕು. ಮುಖ್ಯವಾಗಿ ಪ್ರತಿಯೊಬ್ಬ ಬಸವಾಭಿಮಾನಿಯ ಅಂತರಂಗ ಅನುಭವ ಮಂಟಪವಾಗಬೇಕು ಎಂದು ಹೇಳಿದರು.
ಸ್ವಯಂಸೇವಕರ ನೋಂದಣಿ
ಶಿಬಿರದಲ್ಲಿ ಅನುಭವ ಮಂಟಪ ಕಾರ್ಯಕರ್ತರ ಪಡೆಯ ನೋಂದಣಿ ಕೂಡ ಶುರುವಾಯಿತು.
ಬಸವ ಮೀಡಿಯಾ ವೆಬ್ಸೈಟಿನಲ್ಲಿರುವ ಫಾರಂನಲ್ಲಿ ಹೆಸರು, ಊರು, ವಿಳಾಸ ಮುಂತಾದ ವಿವರಗಳನ್ನು ತುಂಬುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.
ಮೊದಲನೇ ಶಿಬಿರದಲ್ಲಿಯೇ ನೂರಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ.
ಅನುಭವ ಮಂಟಪ ಜಾಗೃತಿ ಶಿಬಿರದಲ್ಲಿ ಎಸ್ ಎಂ ಜಾಮದಾರ್ ಬರೆದಿರುವ ‘ಅನುಭವ ಮಂಟಪ – ನಿರ್ವಹಣೆ ನಮ್ಮ ಹೊಣೆ’ ಪುಸ್ತಕ ಬಿಡುಗಡೆಯಾಯಿತು.
