ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲಾಯಿತು.
ರಾಘವೇಂದ್ರ ಆಶಾಪುರ ಸಂಗೀತ ಶಾಲೆಯ ಕಲಾ ಬಳಗದವರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಅಕ್ಕನ ಬಳಗದ ಡಾ. ಪ್ರಿಯಾಂಕ ಕೊನಿನ್ ಅವರು ಸಿದ್ಧರಾಮರ ಅಜನ ಕಲ್ಪಿತವಲ್ಲದ ಭಕ್ತಿ, ವಿಷ್ಣುವಿನ ಕಲ್ಪಿತವಲ್ಲದ ಭಕ್ತಿ ವಚನದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾನ್ವಿಯ ರಂಗಪ್ಪ ಮ್ಯಾದಾರ ಅವರು ಶಿವಶರಣ ಅಪ್ಪಣ್ಣನ ಕುರಿತು ಮಾತನಾಡುತ್ತಾ, ಅಂದು ಹಡಪದ ಜನಾಂಗದವರ ಮುಖ ನೋಡಬಾರದು ಎಂಬ ವೈದಿಕರ ಕಟ್ಟಳೆಯ ಕಾಲದಲ್ಲಿ, ಬಸವಣ್ಣ ಹಡಪದ ಅಪ್ಪಣ್ಣನವರನ್ನು ತನ್ನ ಕಾರ್ಯದರ್ಶಿಯಾಗಿ ನೇಮಿಸಿಕೊಂಡು ವೈದಿಕ ವ್ಯವಸ್ಥೆಯನ್ನೇ ಸಂಪೂರ್ಣ ವಿರೋಧಿಸಿದರು.
ಅಪ್ಪಣ್ಣನವರು ಸಹ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ, ಅವರ ಪ್ರತಿಯೊಂದು ಆಗುಹೋಗುಗಳನ್ನು ನೋಡಿಕೊಳ್ಳುವುದರ ಜೊತೆಗೆ ಶರಣ ಪರಂಪರೆಗೆ ಹೊಸದಿಕ್ಕನ್ನು ತೋರಿಸಿದವರು ಎಂದರು.
ಅವರ ವಚನ ಆಗುತಿವೆ ಉದಯ ಮಧ್ಯಾಹ್ನ ಅಸ್ತಮಾನ, ಹೋಗುತಿವೆ ದಿನ ವಾರ ಮಾಸ ಸಂವತ್ಸರವು. ಸಾವುತಿವೆ ಪ್ರಾಣ ಆಯುಷ್ಯ. ನೋಡಾ! ಬಸವಪ್ರಿಯ ಕೂಡಲಚೆನ್ನಯ್ಯನೆಂಬ ಮಹಾಘನ ಮಹಿಮರ ಪಾದವನಲ್ಲದೆ, ಅನ್ಯವನರಿಯೆ, ಕಾಣಿರಣ್ಣಾ! ಎಂಬ ಈ ವಚನವನ್ನು ವಿಶ್ಲೇಷಿಸಿದರು.
ಜಗದೇವಿ ಚನ್ನಬಸವ, ಶರಣೆ ನಿರ್ಮಲಾ ನಾಗನಗೌಡ ವಚನಗಳನ್ನು ಹೇಳಿದರು.
ಮುಕ್ತಾ ನರಕಲದಿನ್ನಿ ಅವರು ಅಲ್ಲಮಪ್ರಭುವಿನ ವಚನ ವಿಶ್ಲಷಣೆ ಮಾಡುತ್ತಾ, “ದಿಟದಿಂದ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು, ದಿಟದಿಂದ ತನ್ನ ತಾ ಮಾತಾಡಬೇಕು. ಈ ವಚನವನ್ನು ವಿಶ್ಲೇಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಬಸವ ಇಂಜನಿಯರ್ ವಹಿಸಿದ್ದರು. ಜಾಲಿಂಮ ತಾಲೂಕು ಘಟಕದ ಅಧ್ಯಕ್ಷ ಜೆ. ಬಸವರಾಜ, ನಾಗರಾಜ ಪಾಟೀಲ, ಶರಣಬಸಪ್ಪ ಜಾಡಲದಿನ್ನಿ, ಅಕ್ಕನ ಬಳಗದ ಅನೇಕ ಶರಣೆಯರು ಉಪಸ್ಥಿತರಿದ್ದರು.
ಚೆನ್ನಸವಣ್ಣ ಮಹಾಜನಶೆಟ್ಟಿ ನಿರೂಪಣೆ ಮಾಡಿದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
