ಬೆಳಗಾವಿ:
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ನಾಗನೂರು ಶ್ರೀ ರುದ್ರಾಕ್ಷಿಮಠದ ಸಂಯುಕ್ತಾಶ್ರಯದಲ್ಲಿ 30ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ನಡೆಯಿತು.

ಶಿವಬಸವ ನಗರದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಬಯಲು ಅನುಭವ ಮಂಟಪ ಸಭಾಭವನದಲ್ಲಿ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ಮಹಾಂತೇಶ ತೋರಣಗಟ್ಟಿ, ರಾಜಶೇಖರ ಪಾಟೀಲ, ಮಂಜುನಾಥ ಶರಣರು ತೋರಿಸಿಕೊಟ್ಟರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಇಷ್ಟಲಿಂಗದ ವೈಜ್ಞಾನಿಕ ಮಹತ್ವವನ್ನು ತಿಳಿಸುತ್ತಾ, ಶಿವಯೋಗವು ಸ್ಮರಣ ಶಕ್ತಿಗೆ ಒಂದು ದಿವ್ಯ ಔಷಧವಿದ್ದಂತೆ. ಅಲ್ಲದೆ ಇಷ್ಟಲಿಂಗವು ಒಂದು ವಸ್ತುವಾಗಿರದೆ; ಅದು ಒಂದು ಚೈತನ್ಯಾತ್ಮಕ ಶಕ್ತಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ರೊಟ್ಟಿ, ಪದಾಧಿಕಾರಿಗಳಾದ ಅಶೋಕ ಮಳಗಲಿ, ಮುರಿಗೆಪ್ಪಣ್ಣ ಬಾಳಿ, ಚಂದ್ರಶೇಖರ ಬೂದಿಹಾಳ, ಕೆಂಪಣ್ಣ ರಾಮಾಪುರಿ, ಬಸವರಾಜ ಮಿಂಡೊಳ್ಳಿ, ಸಂಚಾರಿ ಗುರುಬಸವ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಇಂದಿನ ಪ್ರಸಾದ ದಾಸೋಹಿಗಳಾದ ಬಾಳಗೌಡ ದೊಡಬಂಗಿ ಕುಟುಂಬದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
