ಬೈಲಹೊಂಗಲ:
ಕಲ್ಯಾಣ ಕ್ರಾಂತಿಯ ನಂತರ 17ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವಲ್ಲಿ ವಚನಗಳನ್ನು ರಚಿಸಿ ಸಮಾಜದಲ್ಲಿಯ ಮೇಲು-ಕೀಳು ಎಂಬ ಅಸಮಾನತೆಯನ್ನು ಹೋಗಲಾಡಿಸಿ ಸಮಾಜ ಪರಿವರ್ತಿಸಿದ ಕೀರ್ತಿ ಷಣ್ಮುಖ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ಚಿಕ್ಕೊಪ್ಪದ ಬಸವಾನುಭವ ಮಂಟಪದ ನಿರ್ಮಾರ್ಥ ಚೆನ್ನಪ್ಪ ನರಸಣ್ಣವರ ನುಡಿದರು.
ಸ್ಥಳೀಯ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿ ಬಸವೇಶ್ವರ ನಗರ ಅಭಿವೃದ್ಧಿ ಸಂಘ, ಜಾಗತಿಕ ಲಿಂಗಾಯತ ಮಹಾಸಭಾ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತುಗಳ ಸಂಯೋಗದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ಷಣ್ಮುಖ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಉದ್ಘಾಟಿಸಿ ಮಾತನಾಡುತ್ತ, ನಾಡಿನಾದ್ಯಂತ ಸಂಚಾರ ಮಾಡಿ, ಲಿಂಗಾಯತ ಧರ್ಮ ಪ್ರಸಾರ ಮಾಡಿದ ಕೀರ್ತಿ ಷಣ್ಮುಖ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಮೊದಲ ದಿನದ ಪ್ರವಚನ ನೀಡುತ್ತಾ, ತಿಂಗಳ ಪರಿಯಂತ ನಡೆಯಲಿರುವ ಷಣ್ಮುಖ ಶಿವಯೋಗಿಗಳ ಜೀವನ ದರ್ಶನ ಪ್ರವಚನದ ಸಮಗ್ರ ಮಾಹಿತಿ ನೀಡುವುದಾಗಿ ಹೇಳಿದರು.
ಲಿಂಗಾಯತ ಧರ್ಮ ಅನುಭಾವಿಕ ಹಾಗೂ ಅಹಂಗ್ರೋಪಾಸನೆ ಧರ್ಮ ಜ್ಞಾನ ಮತ್ತು ಕ್ರಿಯೆ ಒಂದಾದಾಗ ಅದು ಹೃದಯಕ್ಕೆ ಅಪ್ಯಾಯನವಾಗುತ್ತದೆ. ಶ್ರವಣಕ್ಕೆ ಮೀಸಲಾದ ಶ್ರಾವಣ ಮಾಸದ ಪ್ರವಚನ ಸದುಪಯೋಗ ಪಡೆಸಿಕೊಳ್ಳಲು ಕರೆ ನೀಡಿದರು.
ಪ್ರಥಮ ದಿನದ ವಚನ ಚಿಂತಕರಾದ ದುಂಡಯ್ಯ ಕುಲಕರ್ಣಿ, ಷಣ್ಮುಖ ಶಿವಯೋಗಿಗಳ ಪಿಂಡಸ್ಥಳದ ವಚನ ಕುರಿತು ಮಾತನಾಡಿದರು. ಕುಮಾರಿ ಸಾನ್ವಿ ಮಡಿವಾಳರ ವಚನ ಪಠಿಸಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ ಕೊಳವಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ದ್ಯಾಮನಗೌಡರ, ರಾಷ್ಟ್ರಪ್ರಶಸ್ತಿ ವಿಭೂಷಿತರಾದ ಗೌರಾದೇವಿ ತಾಳಿಕೋಟಿಮಠ, ನಾಗಲಾಂಬಿಕಾ ಮೆಳವಂಕಿ, ಅನ್ನಪೂರ್ಣ ಕನೋಜ, ನಿವೃತ್ತ ಪೊಲೀಸ ಅಧಿಕಾರಿ ಅಶೋಕ್ ಸಾಲಿ, ಶ್ರೀಶೈಲ ಶರಣಪ್ಪನವರ, ಮಹೇಶ ಕೊಟಗಿ, ಮೃತ್ಯುಂಜಯ ಗಡತನವರ, ಬಸವರಾಜ ಹೊಂಗಲ, ಸದಾಶಿವ ಚಾಪಗಾವಿ, ವೀರಭದ್ರಪ್ಪ ಕಾಪಸೆ, ಮಹಾದೇವ ಕರಡಿಗುದ್ದಿ, ಸುವರ್ಣ ಬಿಜುಗುಪ್ಪಿ, ಸರ್ವ ಸಂಘಟನೆಯ ಸದಸ್ಯರು, ಹೊಸೂರು, ಚಿಕ್ಕೊಪ್ಪ ಮಾಟೊಳ್ಳಿ ಶರಣರು, ಪಟ್ಟಣದ ನೂರಾರು ಶರಣ, ಶರಣೆಯರು ಉಪಸ್ಥಿತರಿದ್ದರು.

ಉದ್ಯಮಿಗಳಾದ ಕೀರ್ತಿ ಸಂಗಪ್ಪ ಕಾದ್ರೊಳ್ಳಿ ದಂಪತಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಪತ್ರಯ್ಯ ಕುಲಕರ್ಣಿ ಪ್ರಾರ್ಥನೆ ನಡೆಸಿದರು. ಬಸವರಾಜ ಹುಬ್ಬಳ್ಳಿ ಸ್ವಾಗತಿಸಿದರು. ಗೀತಾ ಅರಳಿಕಟ್ಟಿ ವಂದಿಸಿದರು. ಕಾಡಪ್ಪ ರಾಮಗುಂಡಿ ನಿರೂಪಿಸಿದರು.
