ಜೆ ಎಸ್ ಪಾಟೀಲರ ವಚನಾಂತರಂಗ ಪುಸ್ತಕ ಬಿಡುಗಡೆ
ಗುಂಡ್ಲುಪೇಟೆ :
ತಾಲ್ಲೂಕಿನ ಚಿರಕನಹಳ್ಳಿ ಗ್ರಾಮದ ದೊಡ್ಡಮನೆ ಬಸವಪ್ಪನವರ ಕುಟುಂಬದವರಾದ ಲಿಂಗೈಕ್ಯ ಬಿ. ಸಿದ್ದಮಲ್ಲಪ್ಪ ಅವರ ಧರ್ಮಪತ್ನಿ ಶಿವಶಂಕರಮ್ಮ ಅವರ ಪ್ರಥಮ ವರ್ಷದ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ಬಸವತತ್ವ ಸಂಸ್ಕಾರದಡಿ ನಡೆಯಿತು.

ಶಿವಕುಮಾರ ಸ್ವಾಮಿ ಸಿ.ಎಸ್. ಕುಟುಂಬದವರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಇಮ್ಮಡಿ ಉದ್ದಾನ ಸ್ವಾಮಿಗಳು, ಉದ್ಧಾನೇಶ್ವರ ವಿರಕ್ತ ಮಠ, ಮುಡುಗೂರು ಇವರಿಂದ ಲಿಂಗಪೂಜಾ ಕಾರ್ಯಕ್ರಮ ನಡೆಯಿತು. ಅನಂತರ ಉಡಿಗಾಲ ಮಹಿಳಾ ಭಜನಾ ತಂಡದಿಂದ ವಚನ ಗಾಯನ ಕಾರ್ಯಕ್ರಮ ಭಕ್ತಿಯಿಂದ ನೇರವೇರಿತು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮಿ ಅವರು ಅತಿಥಿಗಳನ್ನು ಸ್ವಾಗತಿಸಿ, ತಮ್ಮ ತಾಯಿ ಅವರೊಂದಿಗಿದ್ದ ಬಾಂಧವ್ಯ ನೆನೆದು ಭಾವುಕರಾದರು.

ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್ ಪಾಟೀಲ ಅವರು ರಚಿಸಿರುವ “ವಚನಾಂತರಂಗ” ಪುಸ್ತಕವನ್ನು ಪೂಜ್ಯ ಬಸವಯೋಗಿ ಪ್ರಭುಸ್ವಾಮಿಗಳು ಬಿಡುಗಡೆ ಮಾಡಿದರು.
ಜೆ.ಎಸ್. ಪಾಟೀಲ ಅವರು ಬಸವತತ್ವದ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ, ಬಸವಾದಿ ಶರಣರು ಕೊಟ್ಟಿರುವ ೨೮ ವಚನಗಳ ಭಾವಾರ್ಥಗಳ ಮೂಲಕ ಅನುಭಾವ ನೀಡಿದರು. ಪ್ರಸ್ತಕ ಬೀಡುಗಡೆಗೆ ದಾಸೋಹ ನೀಡಿದ ಶಿವಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವತತ್ವ ವಿಚಾರವಾದಿಗಳಾದ ಪ್ರಶಾಂತ ದೇವನೂರು ಅವರು ಮಾತನಾಡಿ, ಅನ್ನದಾತ ರೈತರಿಗೆ ಶರಣರು ಕೊಟ್ಟ ಪ್ರಾಮುಖ್ಯತೆಯನ್ನು ತಿಳಿಸಿ, ಯುವಕರು ದುಶ್ಚಟಗಳನ್ನು ಬಿಡಲು ವಚನಗಳು ಪ್ರೇರೆಪಣೆಯಾಗಿವೆ ಎಂದು ತಿಳಿಸಿದರು.
ಪೂಜ್ಯ ಬಸವಯೋಗಿ ಪ್ರಭುಗಳು ಅನುಭಾವ ನೀಡುತ್ತಾ, ಯಾರದೇ ನುಡಿಯಲ್ಲಿ ಸತ್ಯವಿದ್ದರೆ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದರು. ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಮನೆ ಮತ್ತು ಮನಸ್ಸುಗಳಿಗೆ ಬಸವ ಸಂದೇಶ ಮುಟ್ಟಿಸಿದ ಕೀರ್ತಿ ಶ್ರೀಗುರು ಮಲ್ಲೇಶ್ವರರು, ಎಡಿಯೂರು ಸಿದ್ದಲಿಂಗೇಶ್ವರರಿಗೆ ಹಾಗೂ ಸೋಮಹಳ್ಳಿ ಸಿದ್ದಮಲ್ಲೇಶ್ವರರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೂಜ್ಯ ಬಸವಯೋಗಿ ಪ್ರಭುಗಳು, ಶಿವಶರಣಪ್ಪ ಮದ್ದೂರ, ಮಹದೇವಪ್ಪ ಕೆ.ಬಿ, ಪ್ರಭುಲಿಂಗ ಮಹಾಗಾಂವಕರ, ಶ್ರೀಶೈಲ ಮಸೂತೆ, ಓಂಕಾರ್ ಚೊಂಡಿ, ಜಾಣ-ಜಾಣೆಯರ ಜಗದೀಶ, ಜೆ.ಎಲ್.ಎಂ.ನ ಕೃಪಾಶಂಕರ, ಮಡಹಳ್ಳಿ ಮಹೇಶ, ಬಸವಸೇನೆಯ ಬಸವಯೋಗೇಶ, ಬಸವ ಭಾರತ ಪತ್ರಿಕೆ ಸಂಪಾದಕರಾದ ಶಿವರುದ್ರಪ್ಪ ಹಾಗೂ ನಾಡಿನ ಅನೇಕ ಅನುಭಾವಿಗಳು, ಚಿಂತಕರು, ಗ್ರಾಮಸ್ಥರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಶಿವಕುಮಾರಸ್ವಾಮಿ ಅವರು ಕೊನೆಗೆ ಸರ್ವರಿಗೂ ಶರಣು ಸಮರ್ಪಿಸಿದರು.
