ಗದಗ :
ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯನ್ನು ಮುಂದಿಟ್ಟುಕೊಂಡು ಬಸವಾದಿ ಶರಣರ ಹೆಸರಿನಲ್ಲಿ ಹಿಂದುತ್ವದ ಸಮಾವೇಶವನ್ನು ನಡೆಸುತ್ತಿದ್ದಾರೆ. ಜಾತಿ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಬಲಪಡಿಸುವ ಹುನ್ನಾರವುಳ್ಳ ಬಿಜೆಪಿ-ಸಂಘ ಪರಿವಾರ ಪ್ರಾಯೋಜಿತ ‘ಹಿಂದುತ್ವ ಸಮಾವೇಶ’ಕ್ಕೆ ಸಮಾನತೆಯ ತತ್ವ ಮತ್ತು ವಚನ ಚಳುವಳಿಯಲ್ಲಿ ನಂಬಿಕೆ ಇಟ್ಟಂತಹ ಜನರು ಯಾವುದೇ ರೀತಿಯ ಬೆಂಬಲವನ್ನು ನೀಡಬಾರದು”ಎಂದು ಸಿಪಿಐಎಂ ಮುಖಂಡರು ಮನವಿ ಮಾಡಿಕೊಂಡರು.
ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ನೇತೃತ್ವದಲ್ಲಿ ಬಸವಾದಿ ಶರಣರ ಹೆಸರಿನಲ್ಲಿ ನಡೆಯುತ್ತಿರುವ ಹಿಂದುತ್ವ ಸಮಾವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಯು. ಬಸವರಾಜ ಮಾತನಾಡಿ, “ಭಾರತ ದೇಶದ ಸಮಾಜವನ್ನು ಮನುವಾದಿಗಳು ಮೂಲದಲ್ಲೇ ಅಸಮಾನತೆ ಮತ್ತು ಜಾತಿ ಅಸ್ಪೃಶ್ಯತೆಯಿಂದ ಕೂಡಿದ ಸಮಾಜವನ್ನು ಕಟ್ಟಿ ಅದನ್ನು ಪೋಷಿಸಿದರು. ಅದರ ವಿರುದ್ಧ ಬುದ್ಧ, ಬಸವ, ಅಂಬೇಡ್ಕರ್ ಆದಿಯಾಗಿ ಸೂಫಿ ಸಂತರು ಹೋರಾಟವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅಂತಹ ಸಮಾನತೆಯ ಹೋರಾಟದಲ್ಲಿ 12ನೇ ಶತಮಾನದ ಶರಣರ ಚಳುವಳಿಯು ಜಾಗತಿಕವಾಗಿ ಗಮನ ಸೆಳೆದ ಹೋರಾಟ ಆಗಿದೆ”ಎಂದು ಹೇಳಿದರು.
“ಶರಣ ಚಳುವಳಿಯನ್ನು ಅಂದಿನ ಮನುವಾದಿ, ಸನಾತನ ಶಕ್ತಿಗಳು ಮಟ್ಟಹಾಕಿ, ಶರಣರನ್ನು ಕೊಗ್ಗೊಲೆ ಮಾಡಿದರು. ಆ ಸನಾತನವಾದಿಗಳೇ ಇಂದು ಬಿಜೆಪಿ ಮತ್ತು ಸಂಘ ಪರಿವಾರದ ಹೆಸರಿನಲ್ಲಿ ಈ ಸಮಾಜದಲ್ಲಿ ಜಾತಿ ಅಸ್ಪೃಶ್ಯತೆ, ಅಸಮಾನತೆಯನ್ನು ಜೀವಂತವಾಗಿಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಿಲ್ಲಿ ಜಿಲ್ಲೆಯಲ್ಲಿ ನಡೆವ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ಎಲ್ಲರೂ ವಿರೋಧಿಸಬೇಕು.” ಎಂದು ಕರೆ ನೀಡಿದರು.
ನಂತರ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಸ್ ಹಡಪದ ಮಾತನಾಡಿ, “ಇತ್ತೀಚಿಗೆ ಕೇಂದ್ರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರದಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಹಾಗೆ ಅದರ ವಿರುದ್ಧ ಜನತೆ ಎಚ್ಚೆತ್ತುಕೊಂಡು ಆಳುವ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗುತ್ತಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಕಾರ್ಪೊರೇಟ್ ಮಾಧ್ಯಮ ಹಾಗೂ ಇಡೀ ಬಂಡವಾಳಶಾಹಿ ವ್ಯವಸ್ಥೆ ಕೋಮುವಾದಿ ಶಕ್ತಿಗಳ ಜೊತೆಗೆ ಕೈಜೋಡಿಸಿವೆ.
ಜನತೆಯಲ್ಲಿ ಧರ್ಮದ ಹೆಸರಿನಲ್ಲಿ ವಿಭಜನಕಾರಿ ನೀತಿಗಳನ್ನು ಮುನ್ನಲೆಗೆ ತಂದು ಸರ್ಕಾರದ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತದಂತೆ ಮಾಡುವ ಸಲುವಾಗಿ ಇಂಥ ಹಿಂದೂ ಸಮಾವೇಶಗಳು ದೇಶದಲ್ಲೆಡೆ ನಡೆಯುತ್ತಿವೆ”ಎಂದು ಕಿಡಿಕಾರಿದರು.
“ಕರ್ನಾಟಕದಲ್ಲಿ ಹಿಂದುತ್ವ ಮತ್ತು ಸಂಘ ಪರಿವಾರದ ಶಕ್ತಿಗಳ ಕುತಂತ್ರದಿಂದ ಈ ಸಮಾವೇಶ ಗದಗಿನಲ್ಲಿ ನಡೆಯುತ್ತಿದೆ. ಇದಕ್ಕೆ ಮನುಷ್ಯ ಪ್ರೇಮಿಗಳಾದವರು, ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು, ಯಾರೂ ಕೂಡ ಬೆಂಬಲಿಸಬಾರದು”ಎಂದು ಕರೆ ನೀಡಿದರು.
“ದೇಶದ ಜನತೆ ಕೇಂದ್ರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಬಂಡವಾಳಶಾಹಿ ಕಾರ್ಪೊರೇಟ್ ಶಕ್ತಿಗಳ ಪರವಾದ ಮತ್ತು ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಮುಂದಾಗಬೇಕು”ಎಂದು ಕರೆ ನೀಡಿದರು.
ಸಿಪಿಐ(ಎಂ) ನ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, “ಗದಗ ಜಿಲ್ಲೆಯು ಒಂದು ಸೌಹಾರ್ದ ನಾಡು. ಇಲ್ಲಿ ಶ್ರೀ ತೋಂಟದಾರ್ಯ ಮಠ, ಶ್ರೀ ಗವಾಯಿಗಳ ಮಠ, ಡಂಬಳ ಮಠ, ಹಾಲಕೆರೆ ಮಠ ಹೀಗೆ ಬಸವಾದಿ ಶರಣರ ಆಶಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಹಿಂದುತ್ವದ ಕೋಮುವಾದಿಯ ಸಮಾವೇಶವನ್ನು ಗದುಗಿನ ಜನತೆ ಒಕ್ಕೊರಲಿನಿಂದ ವಿರೋಧಿಸಿ ವಿಫಲಗೊಳಿಸಬೇಕು”ಎಂದು ಮನವಿ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯರು ಪೀರು ರಾಠೋಡ, ಮೈಬು ಹವಾಲ್ದಾರ, ಬಸವರಾಜ ಮಂತೂರ, ಚಂದ್ರು ರಾಠೋಡ, ಕನಕರಾಯ ಹಾದಿಮನಿ, ದೇವಪ್ಪ, ಗಣೇಶ ರಾಠೋಡ, ಮರಿಯಮ್ಮ ಮುಳುಗುಂದ, ಮಂಜವ್ವ, ಫಕೀರವ್ವ ಪೂಜಾರ, ಶಿವಕ್ಕ ಬೆವಿನಮರದ, ರೇಣುಕಾ ಛಲವಾದಿ, ಸರಸ್ವತಿ ಬಣಕಾರ, ನಾಗರತ್ನ ಹಾಗೂ ಇತರರು ಉಪಸ್ಥಿತರಿದ್ದರು.
