ಇಸ್ಲಾಂದಲ್ಲಿ ಜಕಾತ್ ಪದ್ಧತಿ ಇದೆ. ಲಿಂಗಾಯತ ಧರ್ಮದಲ್ಲಿ ದಾಸೋಹ ಪದ್ಧತಿ ಇದೆ. ಅದರಂತೆ ಇಸ್ಲಾಂ ಹಾಗೂ ಲಿಂಗಾಯತ ಧರ್ಮದ ಅನೇಕ ವಿಷಯಗಳಲ್ಲಿ ಸಮಾನತೆ ಏರ್ಪಡುತ್ತದೆ ಎಂದು ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಕನ್ನಡದಲ್ಲಿ ಸಾರ್ವಜನಿಕ “ಕುರಾನ್ ಪ್ರವಚನ ಕಾರ್ಯಕ್ರಮ” ಯಶಸ್ವಿ ಜೀವನ ವಿಷಯವಾಗಿ, ಜಮಾಅತೆ ಇಸ್ಲಾಂ ಹಿಂದ್ ಚಿತ್ರದುರ್ಗ ಜಿಲ್ಲೆ ಇವರು ಇಲ್ಲಿನ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ ಸಾಧಿಸಲು ಮುಂದಾದಾಗ ಪಟ್ಟಭದ್ರರು, ಸಾಂಪ್ರದಾಯವಾದಿಗಳು ಅವರನ್ನು ತೀವ್ರ ಹಿಂಸೆಗೆ ಗುರಿ ಮಾಡುತ್ತಾರೆ. ಹಾಗೆಯೇ ಪ್ರವಾದಿ ಮಹಮ್ಮದ್ ಅವರು ಸಹ ಇಂತಹ ವಿರೋಧಗಳನ್ನು ಎದುರಿಸಿ ನೋವು ಅನುಭವಿಸಿದ್ದಾರೆ. ಈರ್ವರೂ ಸಮಾಜದೊಳಗೆ ನಡೆಯುತ್ತಿದ್ದ ಜನರ ಮೇಲಿನ ಶೋಷಣೆ, ದಬ್ಬಾಳಿಕೆ ನಿಲ್ಲಿಸಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರು ಎಂದರು.

ಮುಖ್ಯ ಪ್ರವಚನಕಾರ ಮಂಗಳೂರು ಶಾಂತಿ ಪ್ರಕಾಶನದ ಜಿ. ಮಹಮ್ಮದ್ ಕುಂಞ ಮಾತನಾಡುತ್ತಾ, ದೇವರು ಕೊಟ್ಟಿರುವ ಬುದ್ಧಿಯನ್ನು ನ್ಯಾಯವಾಗಿ ಬಳಕೆ ಮಾಡಿ ಬದುಕಬೇಕು. ಅಂದಾಗ ದೇವರು ಮೆಚ್ಚುತ್ತಾನೆ. ನ್ಯಾಯವಾಗಿ ಬದುಕುವುದೇ ದೇವರಿಗೆ ನಾವು ಸಲ್ಲಿಸುವ ಸೇವೆಯೆಂದರು. ಕುರಾನ್ ನ ಅನೇಕ ವಚನಗಳನ್ನು ಅವರು ಓದಿದರು.
ಫಾದರ್ ಎಂ.ಎಸ್.ರಾಜು ಅವರು ಸಹ ಭಾಗವಹಿಸಿ ಮಾತನಾಡಿದರು.
ಹಾಜಿ ದಾದಾ ಫೀರ್, ಇಕ್ಬಾಲ್ ಹುಸೇನ್ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜದ ಅನೇಕರು ಭಾಗವಹಿಸಿದ್ದರು