ಬೈಲಹೊಂಗಲ:
ತಮ,ರಜ,ಸಾತ್ವಿಕ ಗುಣಗಳು ಮಾನವನಲ್ಲಿ ಸಹಜವಾಗಿ ಹುಟ್ಟಿನಿಂದಲೇ ಬರುತ್ತವೆ. ಪ್ರವೃತ್ತಿಯ ಸಹಜ ಗುಣಗಳನ್ನು ನಿವೃತ್ತಿಯ ಮಾರ್ಗದೆಡೆಗೆ ಕೊಂಡಯ್ಯಲು ದೈವಿಶಕ್ತಿ ಆಶ್ರಯ ನೀಡುತ್ತದೆ. ಶ್ರೀಶೈಲ ಮಲ್ಲಿಕಾರ್ಜುನನ ನಂಬಿ ಸಹನೆ, ತಾಳ್ಮೆ, ಸೇವೆ, ತ್ಯಾಗಳನ್ನು ಬೆಳೆಸಿಕೊಂಡು ಪವಾಡ ಪುರುಷಳಾಗಿ ಅತ್ತೆ, ಮಾವ, ಪತಿ, ನೆಗೆಯಣ್ಣಿಯರ ಮನ ಗೆದ್ದ ಹೇಮರೆಡ್ಡಿ ಮಲ್ಲಮ್ಮ ನಾರಿ ಕುಲದ ಅಮರ ಜ್ಯೋತಿ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಂಜುಳಾ ಶೆಟ್ಟರ ಹೇಳಿದರು.

ಇಲ್ಲಿನ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿ ಬಸವನಗರ ಅಭಿವೃದ್ಧಿ ಸಂಘ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಬೆಳಗಾವಿ ಹಮ್ಮಿಕೊಂಡ 42ನೇಯ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಹೇಮರೆಡ್ಡಿ ಮಲ್ಲಮ್ಮನ ಕುರಿತು ಉಪನ್ಯಾಸ ನೀಡುತ್ತ, ವಿಷಯ ಲಂಪಟ ವೇಮನನ್ನು ಮಹಾ ದಾರ್ಶನಿಕ ಯೋಗಿಯನ್ನಾಗಿ ಪರಿವರ್ತಿಸಿದ ಮಲ್ಲಮ್ಮ ಮಹಾಶಿವರಣೆ ಮಹಿಳಾ ಕುಲದ ಕಣ್ಮಣಿ ಎಂದರು.
ಸಂಘದ ಕಾರ್ಯದರ್ಶಿ ಸುವರ್ಣ ಬಿಜಗುಪ್ಪಿ ಸತ್ಸಂಗ ವಚನ ಚಿಂತನೆಗಳು, ಪ್ರವಚನಗಳು ದಾರ್ಶನಿಕರ ಜೀವನ ಚರಿತ್ರೆಗಳು ಸುಂದರ ವ್ಯಕ್ತಿತ್ವ ಸಮಾಜ ನಿರ್ಮಿಸುವ ಗುರಿ ಹೊಂದಿವೆ. ಭಾಗವಹಿಸಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದರು.
ವಿದ್ಯಾ ರಾಮಣ್ಣವರ ವಚನ ಚಿಂತನೆ ಹಾಗೂ ವಿವೇಕ ಹವಳಪ್ಪನವರ ವಚನ ಪಠನ ನಡೆಸಿಕೊಟ್ಟರು. ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ನೇತೃತ್ವ ವಹಿಸಿ ಲಿಂಗೈಕ್ಯ ಶರಣ ಬಸವರಾಜ ಬೇವಿನಗೀಡದ ಅವರ ಸಂಸ್ಮರಣೆ ಮಾಡಿ, ಅವರ ದಾಸೋಹ ಸೇವೆಯನ್ನು ಸ್ಮರಿಸಿದರು.

ಗೋಷ್ಠಿಯ ಅಧ್ಯಕ್ಷತೆಯನ್ನು ದುಂಡಯ್ಯ ಕುಲಕರ್ಣಿ ವಹಿಸಿದ್ದರು. ಅಜಗಣ್ಣ ಮುಕ್ತಾಯಕ್ಕ ಬಳಗ ಹಾಗೂ ನಗರದ ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು.

ಮುಕ್ತಾಯಕ್ಕ ಬಳಗ ಪ್ರಾರ್ಥಿಸಿತು. ಗೀತಾ ಅರಳಿಕಟ್ಟಿ ಸ್ವಾಗತಿಸಿದರು. ಗೀತಾದೇವಿ ದೇವಿ ಬೇವಿನಗಿಡದ ವಂದಿಸಿದರು. ಜಾಗತಿಕ ಲಿಂಗಾಯತ ಮಹಾಸಭೆ, ಬೈಲಹೊಂಗಲ ತಾಲೂಕ ಮಹಿಳಾ ಘಟಕದ ಅಧ್ಯಕ್ಷ ರಾಜೇಶ್ವರಿ ದ್ಯಾಮನಗೌಡರ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
