ಬೀದರ್
ಜೂನ್ 28 ಬೆಳಿಗ್ಗೆ 10 ಗಂಟೆಗೆ ಬಸವ ಧರ್ಮ ಪೀಠದ ಬಸವ ಮಹಾಮನೆಯಲ್ಲಿ ಬಸವಾದಿ ಶರಣರ ಲಿಂಗಾಯತ ಧರ್ಮದ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ತಿಳಿಸಿದ್ದಾರೆ.
ರಾಷ್ಟ್ರೀಯ ಬಸವ ದಳ ಹಾಗೂ ವಿವಿಧ ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಭೆ ನಡೆಯಲಿದೆ.
ಈ ಸಮಾಲೋಚನಾ ಸಭೆಯಲ್ಲಿ ಲಿಂಗಾಯತ ಧರ್ಮದ ಸ್ವತಂತ್ರ ಧರ್ಮ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಗುವುದು. ಜೊತೆಗೆ ಬಸವ ತತ್ವ ಮತ್ತು ಸಿದ್ಧಾಂತಗಳ ಪರಿಣಾಮಕಾರಿ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಕುರಿತು ಸಮಗ್ರವಾಗಿ ವಿಚಾರ ವಿನಿಮಯ ನಡೆಯಲಿದೆ.
ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಬಸವಾದಿ ಶರಣರು, ಲಿಂಗಾಯತ ಧರ್ಮದ ಮಠಾಧಿಪತಿಗಳು, ಪೂಜ್ಯರು, ಮಾತಾಜಿಯವರು, ಧಾರ್ಮಿಕ ಮುಖಂಡರು ಹಾಗೂ ಅನುಯಾಯಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ.
ಬೀದರ ಜಿಲ್ಲೆಯ ಸಮಸ್ತ ಬಸವಾದಿ ಶರಣರು, ಪೂಜ್ಯರು, ಮಠಾಧಿಪತಿಗಳು, ಮಾತಾಜಿಯವರು, ಸಮಾಜದ ಮುಖಂಡರು ಹಾಗೂ ಲಿಂಗಾಯತ ಧರ್ಮದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾಲೋಚನಾ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
ಸಮಾಲೋಚನಾ ಸಭೆಯಲ್ಲಿ ಚೆನ್ನಬಸವಾನಂದ ಸ್ವಾಮೀಜಿ, ಡಾ.ಸಿದ್ಧರಾಮ ಶರಣರು ಬೆಲ್ದಾಳ, ಬೀದರ್ ಬಸವ ಮಂಟಪದ ಸತ್ಯಾದೇವಿ ಮಾತಾಜಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಸೇರಿದಂತೆ ಪ್ರಮುಖರಾದ ಚೆನ್ನಬಸವ ಹಂಗರಗಿ, ಬಸವರಾಜ ಪಾಟೀಲ ಹಾರೂರಗೇರಿ, ಜಗದೀಶ್ವರ ಬಿರಾದಾರ, ಓಂಪ್ರಕಾಶ ರೊಟ್ಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪೂಜ್ಯರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಹಾಗೂ ಬಸವಾಭಿಮಾನಿಗಳು ಭಾಗವಹಿಸಲಿದ್ದಾರೆ.
