ಮಹಿಳೆಯರ ಪ್ರತಿಭಾ ಅನಾವರಣ
ಕಲಬುರಗಿ:
ಅಕ್ಕಮಹಾದೇವಿ ಹೆಣ್ಣು ಕುಲದ ಅಸ್ಮಿತೆ. ಸ್ವಾಭಿಮಾನದ ಸಂಕೇತ. ಸಮಸ್ಯೆ, ಸವಾಲುಗಳಿಗೆ ಎದೆಗೊಟ್ಟು ನಿಲ್ಲಲು ಅಕ್ಕ ಪ್ರೇರಣೆಯಾಗಿದ್ದಾರೆ ಎಂದು ಪ್ರಾಧ್ಯಾಪಕಿ ಡಾ. ಶಿವಲೀಲಾ ಚಟ್ನಳ್ಳಿ ನುಡಿದರು.
ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬಸವ ಸಮಿತಿಯ ಅಕ್ಕನ ಬಳಗದ ಆಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಜರುಗಿದ ಮಹಾದೇವಿಯಕ್ಕಗಳ ಸಮ್ಮೇಳನ-16 ಸಮಾರೋಪ ನುಡಿಗಳನ್ನಾಡಿದ ಅವರು, ಇಂದಿನ ಧಾವಂತದ ಬದುಕಿಗೆ ಈ ಸಮ್ಮೇಳನ ಹಾಗೂ ಶರಣರ ವಿಚಾರಗಳು ಬಹಳ ಪ್ರಸ್ತುತವಾಗಿವೆ ಎಂದು ಹೇಳಿದರು.

ವಿವಿಧ ಕ್ಷೇತ್ರದ ಮಹಿಳೆಯರು ಸೇರಿ ಮಹಿಳೆಯರೆ ಮಾತನಾಡುವುದು, ಸಾಹಿತಿಗಳಿಗಷ್ಟೇ ಸೀಮಿತಗೊಳಿಸದೆ ವಿದ್ಯಾರ್ಥಿನಿಯರಿಗೆ ಹಾಗೂ ಗೃಹಿಣಿಯರಿಗೂ ಆದ್ಯತೆ ಕೊಡುವುದು ಈ ಸಮ್ಮೇಳನದ ವೈಶಿಷ್ಟ್ಯವಾಗಿದೆ ಎಂದರು.
ಶರಣರು ಅನುಭವ ಮಂಟಪದಲ್ಲಿ ಅಂದು ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರು.
ಇದೇ ಸಂದರ್ಭದಲ್ಲಿ ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿಯನ್ನು ಶರಣ ಸಾಹಿತ್ಯದ ಅನುಪಮ ಸೇವೆಗೈದ ನಿವೃತ್ತ ಪ್ರಾಧ್ಯಾಪಕಿ ಡಾ. ಗಂಗಮ್ಮ ಸತ್ಯಂಪೇಟೆ ಅವರಿಗೆ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗಂಗಮ್ಮ ಸತ್ಯಂಪೇಟೆ, ವೀರ ವೀರಾಗಿಣಿಯಾದ ಅಕ್ಕ ಮಹಾದೇವಿ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ಅಕ್ಕನ ಹೆಸರೆ ಮಹಿಳಾ ಶಕ್ತಿಯ ಸಂಚಲನ. ಶರಣ ಧರ್ಮದ ರಥ ಎಳೆಯುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದರು.

ಶಿಕ್ಷಕಿಯರಾದ ಶಾರದಾ ರಾಂಪುರೆ, ಶಶಿಕಲಾ ಸಾಲೋಕ್ಯ, ಶಾಂತಾ ಪಾಟೀಲ, ಉಮಾ ಪಾಟೀಲ, ನಂದಾ ಪಾಟೀಲ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸಂಚಾಲಕಿ ಡಾ. ಜಯಶ್ರೀ ದಂಡೆ, ಸಮ್ಮೇಳನಾಧ್ಯಕ್ಷೆ ಡಾ. ನೀಲಮ್ಮ ಕತ್ನಳ್ಳಿ ವೇದಿಕೆಯಲ್ಲಿ ಇದ್ದರು.
ಡಾ. ರಾಜೇಶ್ವರಿ, ಶಿವಾನಿ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
