ದಕ್ಷಿಣದ ತುದಿಯಲ್ಲಿ ಬಸವತತ್ವದ ಬಿತ್ತಿದ ಮಹಾಶಕ್ತಿ
ಚಾಮರಾಜನಗರ
ಮರಿಯಾಲ ಮುರುಘರಾಜೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಇಮ್ಮಡಿ ಮಹಾಂತ ಸ್ವಾಮಿಗಳವರ 9ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ 10.30 ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಇಮ್ಮಡಿ ಮರುಘರಾಜೇಂದ್ರ ಸ್ವಾಮೀಜಿ ತಮ್ಮ ಗುರುಗಳ ಶರಣ ಜೀವನ, ಸಾಧನೆ, ಬಸವತತ್ವದ ವಿಚಾರಧಾರೆಗಳನ್ನು ಸಭೆಯಲ್ಲಿ ಮಾತನಾಡಿ ಗುರು ನಮನ ಸಲ್ಲಿಸಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಕೆ. ರವಿಕುಮಾರ, ಪತ್ರಕರ್ತ ಸಂಘದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ವಸಂತಮ್ಮ, ಉಪನ್ಯಾಸ ನೀಡಿದ ನಂಜುಂಡಸ್ವಾಮಿ, ಬಿ.ಎಸ್. ವಿನಯ, ನಾಗರಾಜು ಹಾಗೂ ವಿದ್ಯಾಸಂಸ್ಥೆಯ ನೌಕರವರ್ಗ, ಮರಿಯಾಲ ಗ್ರಾಮಸ್ಥರು ಹಾಜರಿದ್ದರು.
ಶ್ರೀಮಠದ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಥೆಯ ಎಲ್ ಕೆಜಿ ಮತ್ತು ಯುಕೆಜಿ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ್ದ ಬಾಲ ಬಸವಣ್ಣನ ವೇಷಭೂಷಣಗಳ ಸ್ಪರ್ಧೆ, ವಚನ ಗಾಯನ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಸಾಯಂಕಾಲ ಗದ್ದುಗೆಗೆ ವಿಶೇಷ ಪೂಜೆ, ಹಾಗೂ ಹಲವು ಗ್ರಾಮಗಳ ಕಲಾತಂಡಗಳಿಂದ ಶಿವಭಜನಾ ಕಾರ್ಯಕ್ರಮಗಳು ನಡೆದವು. ಬಂದವರಿಗೆಲ್ಲ ದಾಸೋಹವನ್ನು ಏರ್ಪಡಿಸಲಾಗಿತ್ತು.
ಬಸವತತ್ವದ ಬಿತ್ತಿದ ಮಹಾಶಕ್ತಿ
1979ರಲ್ಲಿ ಪೀಠಕ್ಕೆ ಬಂದ ಪೂಜ್ಯರು ಶ್ರೀಮಠದ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು.
1993ರಲ್ಲಿ ಶ್ರೀ ಮುರುಘರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಈ ಭಾಗದ ಎಲ್ಲ ವರ್ಗದ ಮಕ್ಕಳಿಗೆ ಜ್ಞಾನ, ಅನ್ನ ದಾಸೋಹಕ್ಕೆ ಮುನ್ನುಡಿಯನ್ನು ಬರೆದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಭಾಗದಲ್ಲಿ ಬಸವತತ್ವದ ವಿಚಾರಗಳನ್ನು ಬಿತ್ತಿಬೆಳೆದು, ಅದನ್ನು ನಿಜಾಚರಣೆಯಲ್ಲಿ ತಂದ ನಿಜಶರಣರು ಪರಮಪೂಜ್ಯರು.
ತದನಂತರ ಶ್ರೀಮಠಕ್ಕೆ 5ನೇ ಪೀಠಾಧಿಪತಿಗಳಾಗಿ ಪೂಜ್ಯ ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳವರಿಗೆ ಆಶ್ರಮಾಧಿಕಾರ ನೀಡಿ 2017ರಲ್ಲಿ ಲಿಂಗೈಕ್ಯರಾದರು.
ಪೂಜ್ಯರು ಬಯಲಿನೊಳಗೆ ಬಯಲಾಗಿ 9 ವರ್ಷಗಳು ಕಳೆದರೂ ಸಹ ಅವರ ಭೌತಿಕ ಕಾಯ ಮಾತ್ರ ಕರಗಿದೆ. ಆದರೆ ಅವರ ಆಧ್ಯಾತ್ಮಿಕ ಶಕ್ತಿ ಬಸವತತ್ವದ ಪ್ರೇರಣೆ ಕಲ್ಪವೃಕ್ಷವಾಗಿದೆ.
