ಗದಗ :
ಭಾರತ ವೈವಿಧ್ಯಮಯ ದೇಶ. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಬೇರೆ ಬೇರೆ ಧರ್ಮ, ಜಾತಿಗಳು, ಭಿನ್ನ ಭಿನ್ನ ಆಚರಣೆಗಳನ್ನು ನಾವೆಲ್ಲ ಹೊಂದಿದ್ದರೂ ಸಹಿತ ನಾವೆಲ್ಲರೂ ಭಾರತೀಯರು, ನಾವೇಲ್ಲರೂ ಒಂದೇ ಎಂಬ ಭಾವನೆ ಹೊಂದಿರುವುದು ಭಾರತೀಯತ್ವದ ಸಂಕೇತ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೯೮ ನೆಯ ಶಿವಾನುಭವದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಂಜಾರ ಸಮಾಜದ ಸಂಸ್ಕೃತಿ ಮತ್ತು ಆಚರಣೆಗಳು ಬಹಳ ವೈಶಿಷ್ಟ್ಯವಾಗಿವೆ. ಈ ಸಮುದಾಯದವರು ಮೂಲತಃ ಪ್ರಕೃತಿ ಆರಾಧಕರು ಎಂದು ಶ್ರೀಗಳು ಮಾತನಾಡಿದರು.
ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಂ. ಆರ್. ಚವ್ಹಾಣ ಅವರು ಮಾತನಾಡುತ್ತಾ, ಬಂಜಾರ ಸಮುದಾಯ ಇಡೀ ಏಷ್ಯಾ ಖಂಡವನ್ನು ವ್ಯಾಪಿಸಿಕೊಂಡಿದೆ ಎಂದು ಹೇಳಿದರು.
ನ್ಯಾಯವಾದಿ ರವಿಕಾಂತ ಅಂಗಡಿ ಅವರು ಮಾತನಾಡುತ್ತ, ಬಂಜಾರ ಸಮಾಜವು ಮೂಲತ ಅಲೆಮಾರಿಗಳಾಗಿದ್ದರು. ಅನೇಕ ಶತಮಾನಗಳ ಕಾಲ ಆಧುನಿಕ ಜಗತ್ತಿನಿಂದ ದೂರವಿದ್ದು ಬದುಕು ಸಾಧಿಸಿದವರು. ಗದಗ ಪರಿಸರದಲ್ಲಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅಕ್ಷರದ ಅರಿವನ್ನು ಮೂಡಿಸಿ ಹೊರಜಗತ್ತಿಗೆ ಬಂಜಾರ ಸಮಾಜವನ್ನು ಪರಿಚಯಿಸಿದ ಮಹನೀಯರು ಎಂದು ಹೇಳಿದರು.
ಪ್ರಾಚಾರ್ಯರು ಡಾ. ಬಿ.ಎಲ್. ಚೌಹಾಣ ಅವರು ‘ಖೊಳಾ’ ಗ್ರಂಥವನ್ನು ಪರಿಚಯಿಸುತ್ತ ಗ್ರಂಥವು ಬಂಜಾರರ ಅನನ್ಯ ಪರಂಪರೆಯನ್ನು ಅಚ್ಚುಕಟ್ಟಾಗಿ ನಿರೂಪಿಸುತ್ತದೆ ಎಂದರು.
ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀಕಾಂತ ಜಾಧವ ಅವರು, ಬಂಜಾರರು ಮೂಲ ಹಾಗೂ ಅವರು ದೇಶವ್ಯಾಪಿ ವಲಸೆ ಹೋದ ಕ್ರಮವನ್ನು, ಸಂತಶ್ರೀ ಸೇವಾಲಾಲ ಮಹಾರಾಜರ ಕುರಿತು ಮಾತನಾಡಿದರು.
ಬಂಜಾರ ಸಮುದಾಯದ ಇತಿಹಾಸ, ಹಿರಿಮೆ ಗರಿಮೆಯನ್ನು ಕಟ್ಟಿಕೊಡುವ ಗೊರಬೊಲಿ ಭಾಷೆಯಲ್ಲಿ ಬರೆದ ವಿಶೇಷ ಕೃತಿ ಎಂದು ಹೇಳಿದರು.
ಡಾ. ನರೇಂದ್ರ ಪವಾರ, ಡಾ. ಕಿಶೋರ ಪವಾರ ಹಾಗೂ ಬಂಜಾರ ಸಮುದಾಯದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕುಮಾರ ಸಂಜನಾ ಎಂ. ಹದ್ಲಿ ಧರ್ಮಗ್ರಂಥ ಪಠಣ, ಕುಮಾರಿ ಸನ್ನಿಧಿ ಎಂ. ಹದ್ಲಿ ವಚನ ಚಿಂತನ, ಮೃತ್ಯುಂಜಯ ಹಿರೇಮಠ ಹಾಗೂ ಸಂಗಡಿಗರು ವಚನ ಸಂಗೀತ ನೆರವೇರಿಸಿದರು.
ಬಂಜಾರ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಡಾ. ರಮೇಶ ಎಂ. ಕಲ್ಲನಗೌಡರ ನಿರೂಪಣೆ, ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಮಾಡಿದರು. ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ದರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಮು ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್ . ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ, ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾನುಭವ ಕಾರ್ಯಕ್ರಮ ಯಶಸ್ವಿಗೊಳಿಸಿದರು.
