ಎರಡು ಕೋಟಿ ಬಜೆಟಿನ ರಂಗರೂಪಕ
ಬೆಂಗಳೂರು:
12ನೇ ಶತಮಾನದ ಬಸವಾದಿ ಶರಣರ ವಚನ ಚಳವಳಿಯ ವೈಭವವನ್ನು ಮತ್ತೆ ಜನರ ಮುಂದೆ ತರುವ ಉದ್ಧೇಶದೊಂದಿಗೆ ಕರ್ನಾಟಕ ನಾಟಕ ಅಕಾಡೆಮಿಯು ‘ವಚನ ಕಲ್ಯಾಣ’ ರಂಗರೂಪಕವನ್ನು ಸಿದ್ಧಪಡಿಸಿದ್ದು, ನವೆಂಬರ್ ತಿಂಗಳನಿಂದ ರಾಜ್ಯದಾದ್ಯಂತ ಪ್ರದರ್ಶನಗೊಳ್ಳಿಲಿದೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಹೇಳಿದರು.
ರಾಜ್ಯ ಸರ್ಕಾರ ₹2.15 ಕೋಟಿ ವಿಶೇಷವಾಗಿ ನೀಡಿದ ಅನುದಾನದಲ್ಲಿ ಈ ರಂಗ ರೂಪಕವನ್ನು ಸಿದ್ಧಪಡಿಸಲಾಗಿದ್ದು, 12ನೇ ಶತಮಾನದ ಶರಣರ ವಚನ ಚಳವಳಿ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಒಂದು ಹೊಸ ಹೊಳಪು ನೀಡಲಿದೆ ಎಂದು ನಗರದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಚನಕಾರರ ಸಮ-ಸಮಾಜದ ಪರಿಕಲ್ಪನೆಯ ಆಶಯಗಳನ್ನು ಇಟ್ಟುಕೊಂಡು ನಾಟಕಕಾರ ಡಾ. ಕೆ. ವೈ. ನಾರಾಯಣಸ್ವಾಮಿ ಅವರು ವಚನ ಕಲ್ಯಾಣ ರಂಗರೂಪಕ ಸಿದ್ಧಪಡಿಸಿದ್ದಾರೆ.
ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಅವರು ನಿರ್ದೇಶನ, ಹಿಂದೂಸ್ತಾನಿ ಗಾಯಕಿ ಡಾ. ಜಯದೇವಿ ಜಂಗಮಶೆಟ್ಟಿ ಮತ್ತು ಗಾಯಕ ಫಯಾಜಖಾನ್ ಅವರ ಸಂಗೀತದೊಂದಿಗೆ ಈ ರೂಪಕವನ್ನು ಸಿದ್ಧಪಡಿಸಲಾಗಿದೆ.
ಕಲಾ ನಿರ್ದೇಶಕ ಶಶಿಧರ ಅಡಪ ಅವರು ರಂಗ ಸಜ್ಜಿಕೆ ಮತ್ತು ವಿನ್ಯಾಸ ಮಾಡಲಿದ್ದು, ಬಸವನಬಾಗೇವಾಡಿ, ಕೂಡಲಸಂಗಮ, ಬಸವಕಲ್ಯಾಣ, ಬೆಂಗಳೂರು ಮತ್ತಿತರ ಪ್ರಮುಖ ಜಿಲ್ಲೆಗಳಲ್ಲಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನಾಡಿನ 30 ಜನ ಆಯ್ದ ಕಲಾವಿದರು ಈ ವಚನ ಕಲ್ಯಾಣ ರಂಗರೂಪಕದಲ್ಲಿ ನಟಿಸುತ್ತಿದ್ದಾರೆ ಎಂದವರು ತಿಳಿಸಿದರು.

ಒಳ್ಳೆಯ ಕಾರ್ಯಕ್ರಮವಾಗಿದೆ