ರಾಯಚೂರು
ಸ್ಥಳೀಯ ಬಸವ ಕೇಂದ್ರದಲ್ಲಿ ಶರಣ ಘಟ್ಟಿವಾಳಯ್ಯ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಜಯಂತಿ ಆಚರಿಸಲಾಯಿತು.
ಮಾನವನು ಇಹ ಮತ್ತು ಪರದ ಸುಖಶಾಂತಿ ಸಮಾಧಾನವನ್ನು ಸಾಧಿಸಲು ಏನು ಮಾಡಬೇಕಾಗಿಲ್ಲ. ಜೀವನವೇ ಒಂದು ವಿಶಾಲವಾದ ಪಾಠಶಾಲೆ. ಅದು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸಿ, ಇದ್ದುದರಲ್ಲಿಯೇ ಸಂತೋಷದಿಂದ ಇದ್ದು, ಸಕಲ ಜೀವರಾಶಿಗಳಿಗೆಲ್ಲ ಲೇಸನೇ ಬಗೆಯುತ್ತ ಜೀವನವನ್ನು ಸಾಗಿಸಬಹುದು ಎಂಬ ಸಂದೇಶವನ್ನು ಘಟ್ಟಿವಾಳಯ್ಯನವರು ಬಿತ್ತಿ ಹೋಗಿದ್ದಾರೆ ಎಂದು ಶರಣೆ ಮುಕ್ತಾಯಕ್ಕನವರು ಹೇಳಿದರು.
ಮಹಾದೇವಪ್ಪ ಏಗನೂರ ಮಾತನಾಡಿ, ನಡೆದಾಡುವ ದೇವರೆಂದೆ ಪ್ರಸಿದ್ದರಾದ ಸಿದ್ದೇಶ್ವರ ಶ್ರೀಗಳ ನಿರಾಡಂಬರ ನಿರಾಭಾರಿಗಳಾಗಿ ಬದುಕಿದ ಮಹಾನ್ ಚೇತನ. ಅಗಾಧವಾದ ವ್ಯಕ್ತಿತ್ವ ಅವರದು. ಪೂಜ್ಯರ ಪ್ರವಚನಕ್ಕೆ ಲಕ್ಷಗಟ್ಟಲೆ ಜನ ಸಾಗರದಂತೆ ಹರಿದು ಬರುತ್ತಿದ್ದರು ಎಂದು ಹೇಳಿದರು.
ವಿಜಯಕುಮಾರ ಸಜ್ಜನ, ಎಂ. ಚನ್ನಬಸಣ್ಣ, ಡಾ. ಪ್ರಿಯಾಂಕಾ ಗದ್ವಾಲ ಸಿದ್ಧೇಶ್ವರ ಶ್ರೀಗಳು ಹಾಗೂ ಘಟ್ಟಿವಾಳಯ್ಯ ಶರಣರ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಚನಗೌಡ ಕೋಳೂರ ಮಾತನಾಡಿ, ಶರಣರ ನಿಲುವು, ಆದರ್ಶಗಳು ಅಚಲ. ಅವರ ಆದರ್ಶಗಳನ್ನು ಪಾಲಿಸಿ, ಅದರಂತೆ ನಡೆದುಕೊಂಡಲ್ಲಿ ಜೀವನ ಸಾರ್ಥಕವೆಂದರು.
ಪರಮೇಶ್ವರ ಸಾಲಿಮಠ, ಸರೋಜಮ್ಮ ಮಾಲಿಪಾಟೀಲ, ರಂಜಿತಾ ರವಿಪ್ರಕಾಶ, ವೀರೇಶ ಕಳ್ಳೊಳ್ಳಿ, ಅಮರೇಶಪ್ಪ ಅಮೀನಗಡ ಮುಂತಾದವರು ಉಪಸ್ಥಿತರಿದ್ದರು.
ನಾಗೇಶಪ್ಪ ಸ್ವಾಗತಿಸಿದರು. ಅಶ್ವಿನಿ ಮಾಟೂರ, ಎಸ್. ಶಂಕರಗೌಡ ಪ್ರಾರ್ಥನೆ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಗುಡಿಮನಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ವೆಂಕಣ್ಣ ಆಶಾಪುರ ವಂದಿಸಿದರು.