ಗದಗ
ಆರೂಢದಾಸೋಹಿ, ದಾನಚಿಂತಾಮಣಿ ಶರಣ ಮಾಗನೂರು ಬಸಪ್ಪನವರು ಶಿಕ್ಷಣ, ವಾಣಿಜ್ಯ, ಬ್ಯಾಂಕಿಂಗ್ ಸಹಕಾರಿ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಬಸವಾದಿ ಪ್ರಮಥರ ತತ್ತ್ವಾದರ್ಶಗಳನ್ನು ಅಳವಡಿಸಿಕೊಂಡು ಮಹಾಶರಣರೆನಿಸಿಕೊಂಡವರು. ಅವರ ಜೀವಮಾನದ ಸಾಧನೆ-ಸಿದ್ಧಿಗಳು, ಬದುಕು ಪ್ರಸ್ತುತ ಅನುಕರಣೀಯ.
ಇಂತಹ ಮಹಾನಶರಣರ ಹೆಸರಿನಲ್ಲಿ ಆರೂಢದಾಸೋಹಿ ಮಹಾಶರಣ ಮಾಗನೂರು ಬಸಪ್ಪ ರಾಜ್ಯ ಪ್ರಶಸ್ತಿಯನ್ನು ಪ್ರತಿವರ್ಷ ಕೊಡುತ್ತಾ ಬಂದಿದ್ದಾರೆ.
ಈ ವರ್ಷ ಸದರಿ ಪ್ರಶಸ್ತಿಗೆ ಭಾಜನರಾದವರು ಬಸವತತ್ವ ಚಿಂತಕರು ಮತ್ತು ಮಾಜಿ ಸಚಿವರಾಗಿರುವ ಎಸ್. ಎಸ್. ಪಾಟೀಲ ಅವರು. ಶ್ರೀ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ೨೭, ಸೋಮವಾರ ಸಂಜೆ ೭ ಗಂಟೆಗೆ ನಡೆಯುವ ೨೮೦೮ ನೇ ಶಿವಾನುಭವ ಕಾರ್ಯಕ್ರಮದಲ್ಲಿ
ಈ ಪ್ರಶಸ್ತಿ ಪ್ರದಾನ ಜರುಗಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮಾಗನೂರು ಸಂಗಮೇಶ್ವರಗೌಡ ಅಧ್ಯಕ್ಷರು ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ (ರಿ) ದಾವಣಗೆರೆ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ವಿವೇಕಾನಂದಗೌಡ ಪಾಟೀಲ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ‘ಶರಣ ಮಾಗನೂರು ಬಸಪ್ಪನವರ ವ್ಯಕ್ತಿತ್ವ’ ಕುರಿತು ಎಚ್.ಕೆ. ಲಿಂಗರಾಜು ನಿವೃತ್ತ ಜಂಟಿ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಉಪನ್ಯಾಸ ನೀಡಲಿದ್ದಾರೆ. ಬಿ. ವಾಮದೇವಪ್ಪನವರು ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಶ್ರೀಮತಿ ಉಷಾ ಕಾರಂತ ಆಕಾಶವಾಣಿ ಕಲಾವಿದರು ಗದಗ ಅವರಿಂದ ವಚನಸಂಗೀತ, ತನುಶ್ರೀ ಆನಂದ ಬದಿ ಧರ್ಮಗ್ರಂಥ ಪಠಣ, ಕೃಷ್ಣಪ್ರಿಯ ಆನಂದ ಬದಿ ವಚನಚಿಂತನ ಮಾಡಲಿದ್ದಾರೆ. ದಾಸೋಹ ಸೇವೆಯನ್ನು ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ (ರಿ), ದಾವಣಗೆರೆ ಅವರು ವಹಿಸಿಕೊಳ್ಳುವರು ಎಂದು ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
