ಬೀರಿ(ಬಿ) ಗ್ರಾಮದಲ್ಲಿ ಶ್ರಾವಣ ಸಂಭ್ರಮ, ಮಕ್ಕಳಿಂದ ಉದ್ಘಾಟನೆ
ಭಾಲ್ಕಿ:
ಸಮೃದ್ಧ ಮತ್ತು ಸುಂದರ ಬದುಕಿಗೆ ಪ್ರತಿಯೊಬ್ಬರು ಬಸವಣ್ಣನವರು ಬೋಧಿಸಿದ ಸಪ್ತಸೂತ್ರಗಳನ್ನು ಜೀವನದಲ್ಲಿ ಅನುಸರಿಸಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬೀರಿ(ಬಿ) ಗ್ರಾಮದಲ್ಲಿ ಆಯೋಜಿಸಿದ್ದ ‘ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ವಿಶ್ವಗುರು ಬಸವಣ್ಣನವರು ಬೋಧಿಸಿದ ವಚನಗಳಲ್ಲಿ ಕಳಬೇಡ, ಕೊಲಬೇಡ ಎಂಬ ವಚನ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯವಾಗಿದೆ. ಈ ವಚನವು ಮಾನವ ಸಮಾಜಕ್ಕೆ ಯೋಗ್ಯವಾದ ಬದುಕನ್ನು ಕಲಿಸುವ ದಾರಿದೀಪವಾಗಿದೆ.

ಒಬ್ಬ ಒಳ್ಳೆಯ ಮನುಷ್ಯನಾಗಿ ಬಾಳಲು ಬಸವಣ್ಣನವರು ಈ ವಚನದ ಮೂಲಕ ಸಪ್ತಸೂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಈ ಏಳು ನಿಯಮಗಳನ್ನು ಪಾಲಿಸುವುದೇ ಮನಸ್ಸಿನ ಶುದ್ಧಿ (ಅಂತರಂಗ ಶುದ್ಧಿ) ಮತ್ತು ನಡತೆಯ ಶುದ್ಧಿ (ಬಹಿರಂಗ ಶುದ್ಧಿ) ಆಗಿದೆ.
ನಮ್ಮ ಬದುಕು ಪಾವನವಾಗಲು ಮತ್ತು ದೇವರನ್ನು ಒಲಿಸಿಕೊಳ್ಳಲು ಇದೊಂದೇ ದಾರಿ ಎಂದು ಬಸವಣ್ಣನವರು ಹೇಳಿದ್ದಾರೆ. ಈ ವಚನ ಇಂದಿನ ಆಧುನಿಕ ಸಮಾಜಕ್ಕೂ ದಾರಿದೀಪವಾಗಿದೆ. ಪ್ರತಿಯೊಬ್ಬರು ಬಸವಾದಿ ಶರಣರು ತೋರಿದ ಮಾರ್ಗದಲ್ಲಿ ನಡೆದು ಬದುಕು ಸಾರ್ಥಕತೆ ಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಪುಟಾಣಿ ಮಕ್ಕಳು ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ಹಿರಿಯರು, ಪ್ರಮುಖರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನಕ್ಕೆ ಕಳೆ ತಂದು ಕೊಟ್ಟರು.

ಪ್ರವಚನ ಕಾರ್ಯಕ್ರಮದಲ್ಲಿ ಗ್ರಾಮದ ಮಕ್ಕಳು ವಿವಿಧ ಶರಣರ ವೇಷಭೂಷಣ ಧರಿಸಿ ಗಮನ ಸೆಳೆದರು. ಪ್ರವಚನದ ಕೊನೆಯಲ್ಲಿ ಭಾಲ್ಕಿಯ ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ ಮಕ್ಕಳಿಂದ ಬಸವ ಆಸ್ತಿ ರೂಪಕ ನಡೆಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ