ವಚನ ದರ್ಶನ ಮುಟ್ಟುಗೋಲು ಹಾಕದಿದ್ದರೆ ಉಗ್ರ ಹೋರಾಟ: ಶಶಿಕಾಂತ ಪಟ್ಟಣ

ರವಿಕುಮಾರ. ಸಿ.ಕೆ
ರವಿಕುಮಾರ. ಸಿ.ಕೆ

ಧಾರವಾಡ :

ಶರಣ ಸಮಾಜದ ಶಾಂತಿ, ಸ್ವಾಸ್ಥ್ಯ ಹಾಳು ಮಾಡುತ್ತಿರುವ ‘ವಚನ ದರ್ಶನ’ ಪುಸ್ತಕವನ್ನು ಕೂಡಲೇ ಮುಟ್ಟುಗೋಲು ಹಾಕಬೇಕೆಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡುಮೇಲು ಮಾಡುವ ರೀತಿಯಲ್ಲಿ ವಚನ ದರ್ಶನ ಎಂಬ ಕಳಪೆ ಮಟ್ಟದ ಕೃತಿಯನ್ನು ರಚಿಸಲಾಗಿದೆ ಎಂದು ಹೇಳಿದರು.

ವಚನ ದರ್ಶನ ಪುಸ್ತಕವನ್ನು ಕೂಡಲೇ ಸರಕಾರ ಮುಟ್ಟುಗೋಲು ಹಾಕಬೇಕೆಂದು ಎಲ್ಲ ಬಸವ ಪರ ಸಂಘಟನೆಗಳ ಆಗ್ರಹವಾಗಿದೆ. ಸರಕಾರ ಒಂದು ವೇಳೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬಸವ ಕೇಂದ್ರ, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ಪುಣೆ, ಲಿಂಗಾಯತ ಏಕತಾ ಸಮಿತಿ ಅನುಭವ ಮಂಟಪ ಯಾಲಕ್ಕಿ ಶೆಟ್ಟರ ಕಾಲೋನಿ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್, ಜೆ. ಎಲ್.ಎಂ, ರಾಷ್ಟ್ರೀಯ ಬಸವ ದಳ ಮುಂತಾದ ಬಸವ ಪರ ಸಂಘಟನೆಗಳು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಸಿದ್ರಾಮಣ್ಣ ನಡಕಟ್ಟಿ, ಜಿ.ವಿ.ಕೊಂಗವಾಡ,
ಶೇಖರ ಕುಂದಗೋಳ, ಉಮೇಶ ಕಟಗಿ, ಎಂ.ಎಸ್. ಸಿರಿಯಣ್ಣವರ, ಶಿವರುದ್ರಗೌಡ, ಎಸ್.ಕೆ. ಕುಂದರಗಿ, ಜಯಶ್ರೀ ಪಾಟೀಲ ಇದ್ದರು.

ಬಸವಣ್ಣನವರು ವರ್ಗ ವರ್ಣ ಲಿಂಗಭೇದ ರಹಿತ, ಬಂಡಾಯ ಧೋರಣೆ ಹೊಂದಿದ ವಚನ ಚಳುವಳಿಯನ್ನು ಹುಟ್ಟು ಹಾಕಿದರು. ಎಲ್ಲಾ ಕಾಯಕದ ವರ್ಗದವರು ಇಂತಹ ಅಪೂರ್ವ ವೈಚಾರಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ಕಂಬಾರ, ಕುಂಬಾರ, ಅಗಸ, ಬೆಸ್ತ, ಮಾದಿಗ, ಮೇದಾರ ಹೀಗೆ ಬದುಕಿನಲ್ಲಿ ಅಗತ್ಯವಿರುವ ಶ್ರಮ ಸಂಸ್ಕೃತಿಯ ವಾರಸುದಾರರು ಶರಣರು.

ಶರಣರು ಹೊರಗಿನ ಭೌತಿಕ ದೇವರಗಳ, ಗುಡಿ ಸಂಸ್ಕೃತಿ, ಕಂದಾಚಾರ, ಬಹುದೇವೋಪಾಸನೆ, ಸಾಂಪ್ರದಾಯಿಕ ಅಂಧ ಶೃದ್ಧೆಗಳ ವಿರುದ್ಧ ಬಂಡೆದ್ದರು. ಶರಣರ ವಚನ ಚಳುವಳಿಗೆ ತನ್ನದೇ ಆದ ಸ್ವಾನುಭಾವದ ನೆಲೆ ಇದೆ. ಅದು ವೇದ ಆಗಮ ಶಾಸ್ತ್ರ ಪುರಾಣಗಳಿಂದ ಪ್ರಭಾವಿತವಾಗದೆ ಅದಕ್ಕೆ ಭಿನ್ನವಾಗಿ ತನ್ನ ಕಾಯಕದ ಪಾರಿಭಾಷಿಕ ಪದಗಳಿಂದ ಸುಂದರ ಮುಕ್ತ ಶೈಲಿಯ ಗದ್ಯ ಪದ್ಯ ಮಿಶ್ರಿತ ಪುರೋಗಾಮಿ ಸಾಹಿತ್ಯ ಎನ್ನುವುದು ಹಲವು ಶತಕಗಳಿಂದ ದಾಖಲಾಗಿದೆ.

ಇಂತಹ ಸುಂದರ ವಚನ ಸಾಹಿತ್ಯವೂ ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಸುಮಾರು 250 ವರ್ಷಗಳ ವರೆಗೆ ಕಾಲಗರ್ಭದಲ್ಲಿ ಹೂತು ಹೋಗಿತ್ತು.

ಹದಿನೈದನೆಯ ಶತಮಾನದ ಹಂಪಿಯ ಪ್ರೌಢದೇವರಾಯನ ಕಾಲದಲ್ಲಿ ಮತ್ತೆ ವಚನಗಳು ಸಂಕಲನಕ್ಕೆ ಮತ್ತು ಸಂಪಾದನೆಗೆ ಒಳಪಟ್ಟವು. ಶೂನ್ಯ ಸಂಪಾದನೆ ಕೃತಿಯೂ ಸಹಿತ ಅನ್ಯಧರ್ಮಿಯರ ಪೈಪೋಟಿಗೆ ಇಳಿದು ಕೆಲವು ಪವಾಡ ಪುರಾಣ ಕಲ್ಪಿತ ದೃಶ್ಯಗಳನ್ನು ಸೇರಿಸಿತು. ಆಗ ಸಂಸ್ಕೃತ ಉಕ್ತಿಗಳ ಸೇರಿಕೆ ಮತ್ತು ಖೋಟಾ ವಚನಗಳ ಸೇರ್ಪಡೆಯಿಂದಾಗಿ ವಚನ ಚಳುವಳಿಯಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು ಸಹಜ ಮತ್ತು ಸ್ವಾಭಾವಿಕ. ಇಂತಹ ಪ್ರಕ್ಷಿಪ್ತತೆ ಪರಿಷ್ಕರಣೆಯ ಬಗ್ಗೆ ಡಾ ಫ ಗು ಹಳಕಟ್ಟಿ, ಪ್ರೊ ಶಿ ಶಿ ಬಸವನಾಳ, ಡಾ ಆರ್ ಸಿ ಹಿರೇಮಠ, ಡಾ ಎಂ ಎಂ ಕಲಬುರ್ಗಿ ಮುಂತಾದ ಅನೇಕ ಸಂಶೋಧಕರು ಶ್ರಮಿಸಿದ್ದಾರೆ ಎಂದು ಹೇಳಿದರು.

ಈಗ ಅಯೋಧ್ಯಾ ಪ್ರಕಾಶನದವರು ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ವಚನ ದರ್ಶನ ಎಂಬ ಕೃತಿಯು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ.

ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ, ವಚನ ಚಳುವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿಯಲ್ಲಿ ಬಿಂಬಿಸುವ ವಚನ ದರ್ಶನವು ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯವಾಗಿದೆ ಎಂದು ಪಟ್ಟಣ ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *