ಬಸವಕಲ್ಯಾಣ
ಕನ್ನೇರಿ ಸ್ವಾಮಿ ನೇತೃತ್ವದ ಬಸವಾದಿ ಶರಣರ ಹಿಂದೂ ಸಮಾವೇಶ ಈ ತಾತ್ವಿಕ ಹೆಸರಿನ ವಿರುದ್ಧ ನಾವು ಧ್ವನಿ ಎತ್ತಲೇಬೇಕು. ವೈದಿಕ ಸನಾತನಿಗಳು ಲಿಂಗಾಯತ ಧರ್ಮವನ್ನು ಸನಾತನ ಧರ್ಮ ಮಾಡಲು ಹೊರಟಿರುವ ಕುತಂತ್ರ ನೀತಿ ಸರ್ವರಿಗೂ ತಿಳಿದಿರುವಂತದ್ದೇ.
ಇವರ ಈ ಕಲಬೆರಕೆ ಕಾರ್ಯಕ್ರಮ ವಿರುದ್ಧ ಬಂಡಾಯವೆದ್ದಿರುವ ಬಸವತತ್ವದ ಯುವಜನತೆ ಇಂದು ಬಸವಕಲ್ಯಾಣದಲ್ಲಿ ಅಹಿಂಸಾತ್ಮಕವಾಗಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಈ ಹೋರಾಟವು ದಿಕ್ಕು ತಪ್ಪಬಾರದೆಂದು ಮಠಾಧೀಶರ ಮತ್ತು ಮುಂದಾಳತ್ವ ನಾಯಕರನ್ನು ಕೈಬಿಟ್ಟಿದ್ದು ಸೂಕ್ತ ನಿರ್ಧಾರ. ಈ ವರೆಗೆ ಕಾನೂನಾತ್ಮಕವಾಗಿ ನಾವು (ಮಠಾಧೀಶರು) ಲಿಂಗಾಯತ ಮುಂದಾಳತ್ವದ ನಾಯಕರು ಹೋರಾಡಿ; ಕನೇರಿ ಸ್ವಾಮಿಗಳು ವೇದಿಕೆಯಲ್ಲಿ ಮಾತಾಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ.
ಈ ಹೋರಾಟ ಇಷ್ಟಕ್ಕೆ ನಿಲ್ಲಬಾರದು ಎಂಬ ಸ್ಪಷ್ಟ ಸಂದೇಶ ಕೊಡಲು ಯುವಶಕ್ತಿ ಪ್ರತಿಭಟನೆಗೆ ಧುಮುಕಿದ್ದಾರೆ. ಈ ಹೋರಾಟ ಅನಿವಾರ್ಯವಲ್ಲದಿದ್ದರೂ ಇತಿಹಾಸದಲ್ಲಿ 28ರ ದಿನಾಂಕದಂದು ಕನ್ನೇರಿ ಸ್ವಾಮಿ ಕಾರ್ಯಕ್ರಮದ ಪ್ರತಿರೋಧವಾಗಿ ಯುವಶಕ್ತಿ ಹೋರಾಟ ನಡೆಸಿತ್ತು; ಎಂಬ ಪತ್ರಿಕಾ ಮಾಧ್ಯಮ ವರದಿಯಲ್ಲಿ ದಾಖಲಾಗುತ್ತದೆ.
ಇಂದು ಬಸವಕಲ್ಯಾಣ ನೆಲದಲ್ಲಿ ಯುವಶಕ್ತಿ ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಡುವ ದೊಡ್ಡ ಸಂಕಲ್ಪವನ್ನು ಕೈಗೊಳ್ಳಲಿ; ಜೊತೆಗೆ ತನ್ನ ಶಕ್ತಿ ಬಲಪಡಿಸಿಕೊಂಡು “ಕಾಕ್ರೋಚ್ ಜನತಾ ಹೋರಾಟ” ಮಾದರಿಯಲ್ಲಿ ರಚನಾತ್ಮಕವಾಗಿ ಹೋರಾಡಲು ಮುಂದಾಗಲಿ ಎಂದು ನಾನೊಬ್ಬ ಲಿಂಗಾಯತ ಯುವ ಮಠಾಧೀಶನಾಗಿ ಬೆಂಬಲಿಸುವೆ.
ಲಿಂಗಾಯತ ಯುವಕರು ಕೋಮುವಾದಿ ಸನಾತನ ಧರ್ಮದ ಸಂಘಟನೆಯಾದ ಆರ್.ಎಸ್.ಎಸ್. ಸಂಘಟನೆಯಿಂದ ಹೊರಬಂದು ಸ್ವಧರ್ಮ ರಕ್ಷಣೆಗಾಗಿ ಹೋರಾಡುತ್ತಿರುವ ಲಿಂಗಾಯತ ಯುವಕರ ಜೊತೆ ಕೈ ಜೋಡಿಸಿ ಧರ್ಮ ರಕ್ಷಣೆಗೆ ನಿಲ್ಲಬೇಕು.
ಯುವಶಕ್ತಿಯ ಹೋರಾಟಕ್ಕೆ ಜಯವಾಗಲಿ
ಭಾರತ ದೇಶ ಜೈ ಬಸವೇಶ
