ಜಮಖಂಡಿ
‘ಇಂದಿನ ಸಮಾಜದ ಅಭಿರುಚಿ ಬದಲಾಗಿದೆ. ಹಾಡು, ಸಂಗೀತ, ಉಡುಗೆ-ತೊಡುಗೆ, ಬಾಂಧವ್ಯ, ಭಾಷೆ ಎಲ್ಲವೂ ಬದಲಾಗಿದೆ. ಸಮಾಜದ ದಿಕ್ಕು ಬದಲಾಗಿದೆ. ಹಾಗಾಗಿ ಮೂಲ ಸಂಸ್ಕೃತಿ ಉಳಿಸದಿದ್ದರೆ ಉಳಿಗಾಲವಿಲ್ಲ ಎಂದು ಅಥಣಿಯ ಮೋಟಗಿ ಮಠದ ಪ್ರಭುಚೆನ್ನಬಸವ ಸ್ವಾಮೀಜಿ ಎಚ್ಚರಿಸಿದರು.
ಜಮಖಂಡಿ ನಗರದ ಓಲೇಮಠದಲ್ಲಿ ಆನಂದ ದೇವರ ನೇತೃತ್ವದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ನಮ್ಮನ್ನು ಬದಲಾಯಿಸಲು ಸಂತ ಮಹಾಂತರು ಹುಟ್ಟಿ ಬರಬೇಕಾಗಿಲ್ಲ. ನಮಗೆ ನಾವೇ ಬದಲಾಗಬೇಕು. ಶರಣರ ಮುಂದುವರಿದ ಪೀಳಿಗೆಯಾಗಿ ಇಂದಿನವರ ಜವಾಬ್ದಾರಿ ಏನು? ಎಂದು ಪ್ರಶ್ನಿಸಿದ ಅವರು ನಮ್ಮ ಸಾಹಿತ್ಯಕ್ಕೆ, ಸಾಧ್ಯತೆಗಳಿಗೆ ನಾವೇ ಉತ್ತರವಾಗಬೇಕು. ಯುವಕರು ಸನ್ಮಾರ್ಗದಲ್ಲಿ ಸಾಗದಿದ್ದರೆ ಭವಿಷ್ಯವಿಲ್ಲ’ ಎಂದರು.
ಹೃದಯರೋಗ ತಜ್ಞ ಡಾ.ಎಚ್.ಜಿ. ದಡ್ಡಿ ಮಾತನಾಡಿ, ‘ಬಸವಣ್ಣನವರನ್ನು ವಿಶ್ವಗುರು ಎಂದು ಬಾಯಿಂದ ಹೇಳುತ್ತೇವೆ ಹೊರತು ಅವರ ತತ್ವಾದರ್ಶಗಳನ್ನು ಪಾಲಿಸುತ್ತಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಚೌಕಟ್ಟಿನಲ್ಲಿಟ್ಟು ಅವರ ಸಂದೇಶಗಳ ಪ್ರಯೋಜನ ಇಡೀ ಸಮಾಜಕ್ಕೆ ತಲುಪದಂತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಝುಂಜರವಾಡದ ಬಸವರಾಜೇದ್ರ ಶರಣರು, ಡಿಎಸ್ಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶಾಮರಾವ ಘಾಟಗೆ, ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿದರು.
ಹೂವಿನ ಹಿಪ್ಪರಗಿಯ ವಿಶ್ವನಾಥ ದೇವರು, ಅರ್ಬನ್ ಬ್ಯಾಂಕ್ ನಿರ್ದೇಶಕ ಫಕೀರಸಾಬ ಬಾಗವಾನ, ಪ್ರಭುಲಿಂಗ ಜನವಾಡ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಚಿನ್ಮಯ ಜಿರಲಿ, ಪ್ರಗತಿಪರ ರೈತ ಮುದಕಪ್ಪ ಜಮಖಂಡಿ, ಗೀತಾ ಮೇತ್ರಿ, ರೇಣುಕಾ ತೇಲಿ, ಕವಿತಾ ಬಿಜಾಪುರ, ಅನುಸೂಯಾ ಅಸುಗಡೆ ಇದ್ದರು.
ಮುಖ್ಯ ಶಿಕ್ಷಕ ಶಂಕರ ಲಮಾಣಿ ಸ್ವಾಗತಿಸಿದರು. ಅಣ್ಣಾಸಾಹೇಬ ಜಗದೇವ ನಿರೂಪಿಸಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಂದಿಸಿದರು.