ಅನುಭವ ಮಂಟಪ ಬಸವಾದಿ ಶರಣರ ವೈಭವಕ್ಕೆ ಸಿದ್ಧಗೊಂಡ ಕೂಡಲಸಂಗಮ

ಕೂಡಲಸಂಗಮ

ಬಸವ ಜಯಂತಿ ನಿಮಿತ್ಯ ಎಪ್ರಿಲ್ ೨೯, ೩೦ ರಂದು ಕೂಡಲಸಂಗಮ ಸಭಾಭವನ ಬಸವ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದೆ, ಎಲ್ಲರನ್ನೂ ಆಹ್ವಾನಿಸಲು ಕೂಡಲಸಂಗಮದ ರಸ್ತೆಗಳು ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿವೆ.

ಕಳೆದ ನಾಲ್ಕು ದಿನಗಳಿಂದ ಅಧಿಕಾರಿಗಳ ದಂಡೆ ಕೂಡಲಸಂಗಮದಲ್ಲಿ ಇದ್ದು ಕಾರ್ಯಕ್ರಮದ ಸಿದ್ಧತೆಯನ್ನು ಮಾಡುತ್ತಿದ್ದಾರೆ. ಇಲಕಲ್ಲ, ಹುನಗುಂದ ನಗರ ಸಭೆ, ಪುರಸಭೆ ಸಿಬ್ಬಂದಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಕಾರ್ಮಿಕರು ರಸ್ತೆಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೫೦ರ ಸಂಗಮ ಕ್ರಾಸದಿಂದ ಕೂಡಲಸಂಗಮ ದ್ವಿಪಥ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಜನರನ್ನು ಸ್ವಾಗತಿಸುವ ಬೃಹತ್ ಕಮಾನುಗಳು ನಿರ್ಮಾಣಗೊಂಡಿವೆ. ಚಾಲುಕ್ಯ ಮಹಾದ್ವಾರದಿಂದ ದೇವಾಲಯದವರೆಗೂ, ಬಸವೇಶ್ವರ ವೃತ್ತದಿಂದ ಸಭಾಭವನದ ರಸ್ತೆಯ ಎರಡು ಬದಿ, ಮೇಲ್ಭಾಗದಲ್ಲಿ ವಿವಿಧ ಬಣ್ಣದ ವಿದ್ಯುತ್ ದೀಪಗಳು ಎಲ್ಲರನ್ನೂ ಆಕರ್ಷಿಸುತ್ತಿವೆ.

ಚಾಲುಕ್ಯ ಮಹಾದ್ವಾರ, ಬಸವೇಶ್ವರ ವೃತ್ತವೂ ಆಕರ್ಷಕವಾಗಿ ಶೃಂಗಾರಗೊಂಡಿವೆ.

ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಮೈದಾನ, ಬಸ್ ನಿಲ್ದಾಣದ ಬಳಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ್ದಾರೆ. ಸಭಾಭವನದ ಹಿಂಭಾಗದಲ್ಲಿ ಊಟದ ವ್ಯವಸ್ಥೆ ಇರುವುದು. ಸಭಾಭವನದ ಎಲ್ಲ ಕಂಬಗಳಿಗೂ ಬಣ್ಣ ಬಣ್ಣದ ವಿದ್ಯುತ್ ದೀಪ ಅಳವಡಿಸಿರುವರು.

ಸೋಮವಾರ ಸಭಾಭವನ ಬಳಿಯ ಹೆಲಿಪ್ಯಾಡ್ ಡಾಂಬರೀಕರಣ ಕಾರ್ಯವು ಭರದಿಂದ ನಡೆಯಿತು. ಭದ್ರತೆಗಾಗಿ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ.

ಎಪ್ರಿಲ್ ೨೯ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ವಚನ ಸಾಹಿತ್ಯ ಸಮಕಾಲೀನ ಸಂವೇದನೆ ವಿಚಾರ ಗೋಷ್ಠಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಚಾಲನೆ ಮಾಡುವರು. ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾಡುವರು. ಅಧ್ಯಕ್ಷತೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ವಹಿಸುವರು.

ಸಾಂಸ್ಕೃತಿಕ ನಾಯಕ ಬಸವಣ್ಣ-ವರ್ತಮಾನದ ಜರೂರು ಗೋಷ್ಠಿ ೧ರ ಅಧ್ಯಕ್ಷತೆಯನ್ನು ಎಸ್.ಜಿ. ಸಿದ್ದರಾಮಯ್ಯ ವಹಿಸುವರು. ರಂಜಾನ ದರ್ಗಾ, ತಾರಿಣಿ ಶುಭದಾಯಿನಿ, ವಿಕ್ರಂ ವಿಸಾಜಿ ವಿಷಯ ಮಂಡಿಸುವರು.

ಮಧ್ಯಾಹ್ನ ೧೨ ರಿಂದ ೧:೩೦ರ ವರೆಗೆ ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ ಗೋಷ್ಠಿ ೨ರ ಅಧ್ಯಕ್ಷತೆಯನ್ನು ಪುರುಷೋತ್ತಮ ಬಿಳಿಮಲೆ ವಹಿಸುವರು. ಕೆ.ನೀಲಾ, ಎಂ.ಎಸ್. ಶೇಖರ್ ವಿಷಯ ಮಂಡಿಸುವರು.

ಮಧ್ಯಾಹ್ನ ೨:೩೦ ರಿಂದ ೪ರ ವರಗೆ ವಚನ ಸಾಹಿತ್ಯ ಮತ್ತು ಮಹಿಳೆ ಗೋಷ್ಠಿ ೩ರ ಅಧ್ಯಕ್ಷತೆಯನ್ನು ಸವಿತಾ ನಾಗಭೂಷಣ ವಹಿಸುವರು. ಬಸವರಾಜ ಸಾದರ, ಸಬಿತಾ ಬನ್ನಾಡಿ, ಪ್ರಜ್ಞಾ ಮತ್ತಿಹಳ್ಳಿ ವಿಷಯ ಮಂಡಿಸುವರು.

೪ ರಿಂದ ೫:೩೦ರ ವರೆಗೆ ವಿಶ್ವಶಾಂತಿ ಹಾಗೂ ಸಾಮರಸ್ಯ ಗೋಷ್ಠಿ ೪ರ ಅಧ್ಯಕ್ಷತೆಯನ್ನು ಕಾಳೇಗೌಡ ನಾಗವಾರ ವಹಿಸುವರು. ಮೀನಾಕ್ಷಿ ಬಾಳಿ, ಡೊಮಿನಿಕ್, ಮೈಸೂರು ಉಮೇಶ್ ವಿಷಯ ಮಂಡಿಸುವರು.

ಮಂಗಳವಾರ ಬೆಳಿಗ್ಗೆ ೯ ರಿಂದ ರಾತ್ರಿ ೧೦ರ ವರೆಗೆ ವಿವಿಧ ಕಲಾ ತಂಡಗಳಿಂದ ಸಂಗೀತ, ನೃತ್ಯ ರೂಪಕ, ಭರತ ನಾಟ್ಯ, ಗೀಗೀಪದ, ಲಾವಣಿ, ಸಿತಾರವಾದನ, ವಚನ ಸಂಗೀತ, ೩ಡಿ ಬಸವ ನೃತ್ಯ, ಶಿವರಾತ್ರಿ, ಮಾಯಾ ಮದಮರ್ಧನ ಅಲ್ಲಮಪ್ರಭು ನಾಟಕ ಮುಂತಾದವು ನಡೆಯುತ್ತವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *