ಚಿತ್ರದುರ್ಗ :
೧೨ನೇ ಶತಮಾನದ ಕಾಲಘಟ್ಟ ಸರ್ವರಿಗೂ ಸಿಹಿಯನ್ನು ಉಣಬಡಿಸಿದ ಪರ್ವಕಾಲ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸಿ ಸಮಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ ಬಸವಣ್ಣನವರು ಸರ್ವರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ದಾರ್ಶನಿಕರಾಗಿದ್ದಾರೆ ಎಂದು ಚಿತ್ರದುರ್ಗ ಅಂಚೆ ಇಲಾಖೆಯ ಆರ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಶುಕ್ರವಾರ ನಡೆದ ಶರಣ ಶಿವನಾಗಮಯ್ಯ ಅವರ ಶರಣೋತ್ಸವ ಕಾರ್ಯಕ್ರಮದಲ್ಲಿ ಅವರು ವಿಷಯಾವಲೋಕನ ಮಾಡುತ್ತಿದ್ದರು.

ಶರಣರ ತತ್ವಗಳು ಕೇವಲ ಇತಿಹಾಸವಲ್ಲ ಅವು ನಮ್ಮ ನಿತ್ಯಜೀವನದ ಮಾರ್ಗದರ್ಶಕಗಳಾಗಿವೆ. ಶರಣರು ಸರಳವಾದ ಸುಲಲಿತವಾದ ವೈಚಾರಿಕ ಕಂಪನ್ನು ಸೂಸುವ ವಚನಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಸುಜ್ಞಾನದ ಬೆಳಕನ್ನು ಪಸರಿಸಿದರು. ಅಂಥ ವಚನಕಾರರಲ್ಲಿ ಶಿವನಾಗಮಯ್ಯನವರೂ ಒಬ್ಬರು. ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿ ನಂತರ ಶರಣಧರ್ಮದ ಮಾರ್ಗವನ್ನು ಅನುಸರಿಸಿದರು.
ಇವರ ಕಾಲ ೧೧೬೦, ಇವರು ನಾಗಪ್ರಿಯ ಚನ್ನರಾಮೇಶ್ವರ ಅಂಕಿತನಾಮದಲ್ಲಿ ಅವರ ೩ ವಚನಗಳು ಲಭಿಸಿವೆ. ಇವರು ಹುಲ್ಲು ಕೊಯ್ದು ಅದನ್ನು ಮಾರಿ ಬಂದ ಹಣದಿಂದ ಬದುಕನ್ನು ಸಾಗಿಸುತ್ತಿದ್ದರು. ಬಸವಣ್ಣನವರು ಒಮ್ಮೆ ಇವರ ಮನೆಯಲ್ಲಿ ಶಿವಪೂಜೆ ಮಾಡಿ ಹೊಲೆಯ ನಾಗಮಯ್ಯನನ್ನು ಶಿವನಾಗಮಯ್ಯನನ್ನಾಗಿ ಮಾಡಿದರು ಎಂದು ಹೇಳಲಾಗುತ್ತದೆ.
ಆಚರಣೆಗಿಂತ ಆತ್ಮಶುದ್ಧಿ ಮುಖ್ಯ ಎಂದು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ ಶಿವನಾಗಮಯ್ಯನವರು ಲಿಂಗ ಅಂದರೆ ಅದು ಕೇವಲ ಪೂಜೆ ಮಾಡುವ ಸಾಧನವಲ್ಲ. ಅದು ದೇವರ ಸ್ಮರಣೆ, ಭಕ್ತಿ, ಜಾಗೃತಿಯನ್ನು ಉಂಟು ಮಾಡುವಂಥದ್ದು. ಭಕ್ತಿಯಿಂದಲೇ ಶಕ್ತಿ, ಮುಕ್ತಿ. ಕೇವಲ ಕೈಯಲ್ಲಿ ಲಿಂಗವ ಹಿಡಿದುಕೊಂಡು ಅಥವಾ ಬಾಯಿಯಿಂದ ಶಿವನನನ್ನು ಜಪಿಸಿದರೆ ಉಪಯೋಗವಿಲ್ಲ. ಸನ್ನಡತೆ, ಸನ್ಮಾರ್ಗ, ಸದಾಚಾರ ಸಂಪನ್ನತೆಯಿಂದ ಬದುಕಬೇಕು. ಲಿಂಗದ ಮೇಲೆ ಭಕ್ತಿ ಮತ್ತು ಶ್ರದ್ಧೆ ಇಟ್ಟು ಪೂಜಿಸಬೇಕು. ಸಂಸ್ಕಾರವಂತರಾಗಿ ಸಂಯಮ, ಆಂತರಿಕ ಶುದ್ಧತೆ ಅಗತ್ಯತೆಯನ್ನು ಪ್ರತಿಪಾದಿಸುವ ಶಿವನಾಗಮಯ್ಯನವರ ತತ್ವಾದರ್ಶಗಳು ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅನುಸರಿಸಿದರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು, ಶಿವನಾಗಮಯ್ಯನವರ ಘನಸುಖ ಮಹಾಸುಖವ ಮುಟ್ಟಲು ಸಮಸುಖಂಗಳ ಸುಖಿಸಬಲ್ಲ ವಚನ ವಿಶ್ಲೇಷಿಸುತ್ತ, ನಮ್ಮ ನಾಲಿಗೆ ನಲ್ನುಡಿಗಳನ್ನು ಆಲಿಸುತ್ತದೆಯೋ ಅಥವಾ ನಾಲ್ಕು ಜನರ ಬಗ್ಗೆ ತುಚ್ಛವಾಗಿ ಮಾತನಾಡುತ್ತದೆಯೋ, ನಮ್ಮ ಕರ್ಣಂಗಳು ಶರಣರ ವಚನಗಳ ಹಿಂದಿರುವ ಆಶಯಗಳನ್ನು ಆಲಿಸುತ್ತದೆಯೋ ಅಥವಾ ಮತ್ತೊಬ್ಬರ ವಿಚಾರಗಳ ಬಗ್ಗೆ ಆಸಕ್ತಿ ತೋರುತ್ತದೆಯೋ ಎನ್ನುವುದನ್ನು ಅರಿಯಬೇಕಾಗುತ್ತದೆ.
ನಮ್ಮ ಮನಸ್ಸುಗಳು ಒಳ್ಳೆಯ ಚಿಂತನೆಗಳನ್ನು ಆಲೋಚನೆಗಳನ್ನು ಆಲಿಸಬೇಕು. ನಮ್ಮ ಹವ್ಯಾಸಗಳೇ ನಮ್ಮ ಇಂದ್ರಿಯಗಳು. ಸಮಾಜದಲ್ಲಿ ನಿಜಗುಣಿಯಾಗಿ ಗುರುತಿಸಿಕೊಳ್ಳುವುದು ಬಹಳ ಅಪರೂಪ. ನಿಜಗುಣಿಗಳನ್ನು ಗುರುತಿಸಲು ನಿಜಗುಣಿಗಳಿಂದ ಮಾತ್ರ ಸಾಧ್ಯ. ನಿಜಗುಣಿ ಎನಿಸಿಕೊಂಡವನು ಪ್ರಚಾರದಲ್ಲಿ ಇರುವುದಿಲ್ಲ. ಜತೆಗೆ ಅವರು ಗುರುತಿಸಿಕೊಳ್ಳುವುದಿಲ್ಲ. ಅಂಥವರು ಬಹಳ ಅಪರೂಪ. ಅಂಥ ನಿಜಗುಣಿಗಳಲ್ಲಿ ಶಿವನಾಗಮಯ್ಯನವರೂ ಒಬ್ಬರು.
ಕಾಯದ ಪರಿಶುದ್ಧ ಕಾರ್ಯಗಳೇ ಕಾಯಕ ಆಗುತ್ತದೆ. ಹಾಗಾಗಿ ನಮ್ಮ ನಡುವೆ ಇರುವ ನಿಜಗುಣಿಗಳನ್ನು ಗುರುತಿಸುವಂತಾಗಬೇಕು. ಎಲೆಮರೆ ಕಾಯಾಗಿ ಬದುಕುವವರು ಒಂದು ವರ್ಗವಾದರೆ; ಬದುಕನ್ನು ತೆರೆದಿಟ್ಟುಕೊಂಡು ನಿಜಗುಣಿಗಳೆಂದು ಗುರುತಿಸಿಕೊಳ್ಳುವ ತೋರಿಕೆಯ ವರ್ಗವೇ ಬೇರೆ. ಇಂದು ನಾವು ಕೇಳಿದ ಚಿಂತನೆಗಳು ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ತರಲಿ. ನಾವೆಲ್ಲ ಶರಣರ ಮಾರ್ಗದಲ್ಲಿ ನಡೆದು ಸಮಾನತೆಯ ಸಮಾಜ ನಿರ್ಮಿಸೋಣವೆಂದರು.

ಕಾರ್ಯಕ್ರಮದಲ್ಲಿ ಶ್ರೀ ಗೋವಿಂದ ಸ್ವಾಮೀಜಿ, ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ, ಟಿ.ಪಿ. ಜ್ಞಾನಮೂರ್ತಿ, ವಿವಿಧ ಸಮಾಜಗಳ, ಸಂಘ-ಸಂಸ್ಥೆಗಳ ಮುಖಂಡರುಗಳಾದ ನಾಗರಾಜ ಸಂಗಂ, ಪೈಲ್ವಾನ್ ತಿಪ್ಪೇಸ್ವಾಮಿ, ಬಸವರಾಜ ಕಟ್ಟಿ, ಪ್ರೊ. ಲಿಂಗಪ್ಪ, ಶ್ರೀಮತಿ ಸರಳಾ ಲಿಂಗಪ್ಪ, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮೊದಲಾದವರಿದ್ದರು.
ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭಕ್ಕೆ ಜ್ಯೋತಿ ಗಿರೀಶ್ ವಚನ ಗೀತೆ ಹಾಡಿದರು. ಇತಿಹಾಸ ಉಪನ್ಯಾಸಕ ಸಿ.ಎಂ. ವಿಶ್ವನಾಥ್ ಸ್ವಾಗತಿಸಿದರು. ಡಾ. ಕೆ. ಪುಷ್ಪ ಕಾರ್ಯಕ್ರಮ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
