ಶಿಗ್ಗಾವಿ:
‘ಮೌಢ್ಯಾಚರಣೆಗಳನ್ನು ಬದಿಗಿಟ್ಟು ಹಬ್ಬಗಳ ಮೂಲ ಅಸ್ತಿತ್ವಗಳತ್ತ ಗಮನಹರಿಸಬೇಕು’. ಹಬ್ಬಗಳ ಆಚರಣೆಯ ಹಿಂದಿನ ನಿಜಾರ್ಥವನ್ನು ಅರಿತು ಆಚರಿಸಬೇಕು,’ ಎಂದು ಬಂಕಾಪುರ ಪಟ್ಟಣದ ದೇಸಾಯಿಮಠದ ಪೂಜ್ಯ ಮಹಾಂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿಮಠದಲ್ಲಿ ಭಾನುವಾರ ಬಸವ ಪಂಚಮಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಹಾಲು ವಿತರಿಸಿ ಅವರು ಮಾತನಾಡಿದರು.
ಮೂಢನಂಬಿಕೆ ಮತ್ತು ಕಂದಾಚಾರಗಳು ಹಬ್ಬಹರಿದಿನಗಳಿಂದ ದೂರಾಗಬೇಕು ಎಂಬ ಸಂದೇಶದೊಂದಿಗೆ ಮಕ್ಕಳಿಗೆ ಹಾಲು ನೀಡಬೇಕಾಗಿದೆ. ಇಂದು ಕಲ್ಲು, ಮಣ್ಣಿನ ಮೂರ್ತಿಗಳಿಗೆ ಹಾಲೆರೆದು ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶದ ಹಾಲು ನಾಶಮಾಡುತ್ತಿದ್ದಾರೆ.

ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿರಿ. ರೈತರು ಹೆಚ್ಚಾಗಿ ಹೈನುಗಾರಿಕೆ ಮಾಡುವ ಜತೆಗೆ ಮಕ್ಕಳಿಗೆ ಹಾಲು ಕುಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಬಂಕಾಪುರ ಘಟಕದ ಅಧ್ಯಕ್ಷ ಎ.ಕೆ. ಆದವಾನಿಮಠ, ಹುಚ್ಚಯ್ಯನವರು ಹುಚ್ಚಯ್ಯನಮಠ, ಗಿರಿರಾಜ ದೇಸಾಯಿ, ರೈತ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹಳವಳ್ಳಿ, ಮಾಲತೇಶ ಸಕ್ರಿ, ಶಂಭಣ್ಣ ಕುರಗೋಡಿ, ವಿರೂಪಾಕ್ಷಪ್ಪ ರಾಣೋಜಿ ಸೇರಿದಂತೆ ರೈತ ಸಂಘದ ಅನೇಕ ಮುಖಂಡರು ಮತ್ತು ವಿವಿಧ ಸಮಾಜಗಳ ಮುಖಂಡರು ಇದ್ದರು.
