ಬೈಲಹೊಂಗಲ :
ಕಲ್ಯಾಣ ಕ್ರಾಂತಿಯ ನಂತರ 15ನೇ ಶತಮಾನದಲ್ಲಿ ವಚನಗಳ ಸಂಕಲನ ಕಾರ್ಯ ನಡೆಯಿತು. ಸಂಕಲನಕಾರರು ವಚನಗಳನ್ನು ಸಂಭಾಷಣೆಯ ರೂಪದಲ್ಲಿ ಸಂಕಲಿಸಿ ಶೂನ್ಯ ಸಂಪಾದನಗಳಾಗಿ ರಚಿಸಿ ಆಧ್ಯಾತ್ಮವನ್ನು ವಚನಗಳ ಮುಖಾಂತರ ಸರಳವಾಗಿ ತಿಳಿಸಿದರು.
ಶೂನ್ಯ ಸಂಪಾದನೆಗಳ ಹಲವಾರು ಪ್ರಸಂಗಗಳಲ್ಲಿ ಅಕ್ಕ ಅಲ್ಲಮರ ಪ್ರಸಂಗ ಸ್ತ್ರೀ ಕುಲದ ಸ್ಪೂರ್ತಿ ಹಿರಿಮೆ ಆಗಿದೆ ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.

ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಬಸವ ಜಯಂತಿಯ ಮೂರನೇ ದಿನದ ಮಹಿಳಾ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ರಾಮದುರ್ಗದ ನಾಗನೂರು ಗುರುಬಸವ ಮಠದ ಪೂಜ್ಯ ಬಸವಗೀತಾ ಮಾತಾಜಿ ಅಕ್ಕ ಅಲ್ಲಮರ ಸಂವಾದ ವಿಷಯ ಕುರಿತು ಅನುಭಾವ ನೀಡಿದರು. ಬಸವಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಭಾರತಿ ತಟವಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಕ್ಕ ಅಂಗಡಿ ನೇತೃತ್ವ ವಹಿಸಿದ್ದರು.

ಮುಂಜಾನೆ ಬಾಲ ಬಸವನ ತೊಟ್ಟಿಲು ಉತ್ಸವ, ಬಸವೇಶ್ವರ ಭಾವಚಿತ್ರ ವಚನ ಸಾಹಿತ್ಯದ ಮೆರವಣಿಗೆ ನಡೆಯಿತು. ಮೆರವಣಿಗೆಯ ನೇತೃತ್ವವನ್ನು ದುಂಡಯ್ಯ ಕುಲಕರ್ಣಿ, ಸಂತೋಷ ಕೊಳವಿ ವಹಿಸಿದ್ದರು. ಮುಕ್ತಾಯಕ್ಕ ಅಜಗಣ್ಣ ಬಳಗ, ನಗರದ ನೂರಾರು ಸದ್ಭಕ್ತರು ಭಾಗವಹಿಸಿದ್ದರು.

ಆರೋಹಿ ಮಸ್ತನ್ನವರ, ಸುಹಾಸಿನಿ ಶಿಳ್ಳಿ ವಚನ ಪಠಿಸಿ ಚಿಂತನೆಗೈದರು. ಗೀತಾ ಅರಳಿಕಟ್ಟಿ ಸ್ವಾಗತಿಸಿದರು. ಪತ್ರಯ್ಯ ಕುಲಕರ್ಣಿ ವಂದಿಸಿದರು. ದಾಕ್ಷಾಯಿಣಿ ಹುಬ್ಬಳ್ಳಿ ನಿರೂಪಿಸಿದರು.
