ಚನ್ನಮ್ಮನ ಕಿತ್ತೂರು :
‘ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ತತ್ವಗಳು ಪ್ರತಿ ಮನೆ, ಮನೆಗೂ ಮುಟ್ಟಬೇಕಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಬೈಲೂರು ಗ್ರಾಮದಲ್ಲಿರುವ ನಿಷ್ಕಲ ಮಂಟಪದ ಹರ್ಡೇಕರ್ ಮಂಜಪ್ಪ ಅವರ ಸಭಾಭವನದಲ್ಲಿ ಈಚೆಗೆ ‘ಅರಿವೇ ಗುರು’ ಬಸವ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

‘ಕಳೆದ ಮೂರು ದಶಕಗಳಿಂದ ಬಸವಣ್ಣನವರ ಚಿಂತನೆಯ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದರು.
ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ಸತ್ತಿಯ ಪೂಜ್ಯ ಮಲ್ಲಿಕಾರ್ಜುನ ಸ್ವಾಮೀಜಿ, ವಿಧಾನ ಪರಿಷತ್ತು ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಚನ್ನಮ್ಮನ ಕಿತ್ತೂರು ತಾಲ್ಲೂಕು ಐದನೇ ಸ್ಥಾನ ಗಳಿಸಲು ಕಾರಣರಾದ ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕಿ, ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಮುಖ್ಯಪೇದೆ ಜಗದೀಶ ಕಾದ್ರೋಳ್ಳಿ, ಬೈಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಆರ್. ಆರ್. ರೇವಡೆಕರ್, ಪಿಯು ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಮುದಗಲ್ಲನ ಪೂಜ್ಯ ಮಹಾಂತ ಸ್ವಾಮೀಜಿ, ಗರಗದ ಗುರುಮಡಿವಾಳೇಶ್ವರ ಮಠದ ಪೂಜ್ಯ ಆತ್ಮರಾಮ ಸ್ವಾಮೀಜಿ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಬಾಲ ಭವನದ ಅಧ್ಯಕ್ಷ ಅಡವೇಶ ಇಟಗಿ, ಎಂ.ಕೆ. ಹುಬ್ಬಳ್ಳಿ ರಾಣಿ ಶುಗರ್ ಕಾರ್ಖಾನೆಯ ಉಪಾಧ್ಯಕ್ಷ ಶಿವನಗೌಡ ಪಾಟೀಲ, ನಿರ್ದೇಶಕ ಶಂಕರ ಹೊಳಿ, ಶಂಕರ ಗುಡಾಸ, ಭಾಗವಹಿಸಿದ್ದರು. ವಿವೇಕ ಕುರುಗುಂದ ನಿರೂಪಣೆ ಮಾಡಿದರು.

ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದ ಪಂಡಿತ ವೆಂಕಟೇಶಕುಮಾರ ಅವರ ವಚನ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮೆರಗು ಹೆಚ್ಚಿಸಿತು.
