ಬೆಳಗಾವಿ:
ಇಷ್ಟಲಿಂಗ ಪೂಜೆ ಅದು ಮೂಢನಂಬಿಕೆಯಲ್ಲ, ತೋರಿಕೆಯ ಡಂಬಾಚಾರವೂ ಅಲ್ಲ. ಚಂಚಲವಾದ ಮನಸ್ಸನ್ನು ನಿಯಂತ್ರಿಸುವ ಅಧ್ಬುತ ಸಾಧನವೇ ಇಷ್ಟಲಿಂಗ ಪೂಜೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಇಂದು ನಾಗನೂರು ರುದ್ರಾಕ್ಷಿ ಮಠದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು, ದೇವರು ದೂರ ಎಲ್ಲೋ ಇಲ್ಲದೆ, ನಮ್ಮೊಳಗೇ ಇದ್ದಾನೆ ಎಂಬ ಅನುಭವ ನೀಡುವ ಇಷ್ಟಲಿಂಗ ಪೂಜೆಯನ್ನು ಪ್ರತಿನಿತ್ಯ ಮಾಡಬೇಕು. ಇದರಿಂದ ಮನಸ್ಸಿನ ಏಕಾಗ್ರತೆ, ದೇಹಾರೋಗ್ಯ ವೃದ್ಧಿಯಾಗುತ್ತದೆ ಎಂದರು.

ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಪೂಜಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವೇದಿಕೆಯ ಮೇಲೆ ಶ್ರೀಮಠದ ಶಿವಲಿಂಗ ದೇವರು, ನಿತಿನ ದೇವರು ಉಪಸ್ಥಿತರಿದ್ದರು.

ಪೂಜಾ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ನಗರ ಪ್ರದಾನ ಕಾರ್ಯದರ್ಶಿ ಸಿ.ಎಮ್. ಬೂದಿಹಾಳ, ಸೇವಾರತ್ನ ಪ್ರಶಸ್ತಿ ವಿಜೇತ ಕೆಂಪಣ್ಣ ರಾಮಾಪೂರ ಸೇರಿದಂತೆ ಜಾಗತಿಕ ಲಿಂಗಾಯತ ಮಹಾಸಭೆ, ಸಂಚಾರಿ ಗುರುಬಸವ ಬಳಗದ ಶರಣರು, ರುದ್ರಾಕ್ಷಿಮಠದ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
