ಬೀದರ್
ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯತ ಮತ್ತು ವೀರಶೈವ ಸಮುದಾಯಗಳ ಮತಗಳು ಹೆಚ್ಚಿವೆ, ಆದರೆ ಇವುಗಳ ನಡುವಿನ ಒಡಕಿನಿಂದ ಮತಗಳು ವಿಭಜನೆ ಆಗುತ್ತಿದ್ದವು.
ಅದಕ್ಕೆ ಸಾದರ ಪ್ರಾಬಲ್ಯವಿದ್ದರೂ ಶಾಮನೂರು ಕುಟುಂಬಕ್ಕೆ ವೀರಶೈವ ಲಿಂಗಾಯತ ಸಮುದಾಯದ ಮತಗಳು ಅಷ್ಟೊಂದು ಬರುತ್ತಿದ್ದಿಲ್ಲ ಅನ್ನೋ ಮಾತಿತ್ತು.
ಒಂದು ದಿವಸ ನಾನು ಲಿಂಗೈಕ್ಯ ಶ್ರೀ ಶಿವಶಂಕರಪ್ಪ ಶಾಮನೂರು ಚರ್ಚೆ ಮಾಡುತ್ತಿದ್ದಾಗ ಅವರು 2018ರ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಲಿಂಗಾಯತ ಮತಗಳು ಬಂದಿಲ್ಲ ಮುಸ್ಲಿಮರು ಮತ ಹಾಕಿದ್ದರಿಂದ ಗೆದ್ದೆ ಎಂದು ಹೇಳಿದರು.
ನೀವು ಲಿಂಗಾಯತ ಧರ್ಮಕ್ಕೇ ಅಲ್ಪಸಂಖ್ಯಾತ ಸೌಲಭ್ಯ ವಿರೋಧ ಮಾಡಿದಕ್ಕೆ ನಿಮಗೆ ಮತ ನೀಡಿಲ್ಲ ಎಂದು ನೇರವಾಗಿ ನಾನು ಹೇಳಿದ್ದೆ. ಅವರು ಒಪ್ಪಿದರೂ ವಿಭಜನೆ ಬೇಡ ನಾವೆಲ್ಲ ಒಂದಾಗೋಣ ಎಂದರು.

ಅವರು ಲಿಂಗಾಯತ ಧರ್ಮ ಮತ್ತು ಬಸವ ತತ್ವ ಸಿದ್ದಾಂತ ಪರವಾಗಿ ಕ್ರಮೇಣ ವಾಲಿದ್ದರು. ವೀರಶೈವ ಭವನಕ್ಕೆ ವೀರಶೈವ ಲಿಂಗಾಯತ ಭವನ ಎಂದು ಹೆಸರಿಟ್ಟರು, ವೀರಶೈವ ಲಿಂಗಾಯತ ಧರ್ಮದ ಸ್ಥಾಪಕ ಬಸವಣ್ಣ ಎಂದು ಬೈ ಲಾ ಬರೆದರು. ಎಲ್ಲಾ ಕಡೆ ಬಸವಣ್ಣನವರ ಹೆಸರು ತೆಗೆದುಕೊಳ್ಳುತ್ತಿದ್ದರು. ಅವರು ಇನ್ನೂ ಇದ್ದಿದ್ದರೆ ಇನ್ನಷ್ಟು ಬದಲಾವಣೆಗಳು ಆಗುತ್ತಿದ್ದವು.
ಈ ಉಪ ಚುನಾವಣೆಯಲ್ಲಿ ಟಿಕೆಟ್ ಸಮಸ್ಯೆಯಿಂದ ಕೆಲವು ಮುಸ್ಲಿಂ ಮುಖಂಡರು ಕಾಂಗ್ರೆಸ್ ಮೇಲೆ ಮುನಿಸಿಕೊಂಡರು. ಕಾಂಗ್ರೆಸ್ ಸೋಲಿಸಬೇಕು ಎನ್ನುವ ವಾತಾವರಣ ನಿರ್ಮಾಣ ಆಯಿತು. ಆದರೆ ಕೆಲವು ಮುಸ್ಲಿಂ ಕಾಂಗ್ರೆಸ್ ನಾಯಕರು ದಾವಣಗೆರೆ ನಗರದಲ್ಲಿ ಬಿಡಾರ ಹೂಡಿ ನಿರಂತರ ಪ್ರಯತ್ನ ನಡೆಸಿ ಹೆಚ್ಚಿನ ಹಾನಿ ತಪ್ಪಿಸಿದರು.
ಆದರೂ ಕಾಂಗ್ರೆಸ್ ವಿರೋಧಿ ಮುಸ್ಲಿಂ ಅಭ್ಯರ್ಥಿಗಳು ಸೇರಿ ಇಪ್ಪತ್ತು ಮೂರು ಸಾವಿರ ಮತಗಳನ್ನು ಗಿಟ್ಟಿಸಿಕೊಂಡರು. ಅವೆಲ್ಲಾ ಕಾಂಗ್ರೆಸ್ ಮತಗಳೇ, ಕಾಂಗ್ರೆಸ್ ಅಭ್ಯರ್ಥಿ ಸುಮಾರು ಮೂವತ್ತು ಸಾವಿರ ಮತಗಳಿಂದ ಗೆಲ್ಲಬಹುದಿತ್ತು.
ಆದರೆ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳು ವೈಮನಸು ಮರೆತು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತದಾನ ಮಾಡಿದ್ದು ವಿಶೇಷ ಬೆಳವಣಿಗೆಯಾಯಿತು.
ಲಿಂಗಾಯತ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನಿಂದ ದಾವಣಗೆರೆಯಲ್ಲಿ ಪ್ರಚಾರ ನಡೆಸಿದರು, ಸಮುದಾಯದ ಎರಡು ದೊಡ್ಡ ಸಭೆ ಮತ್ತು ಹಲವಾರು ಸಣ್ಣ ಸಭೆಗಳು ನಡೆದು ವೈಮನಸ್ಸು ದೂರವಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಧರ್ಮದ ಮತ್ತು ಬಸವಣ್ಣ ಪರ ಮಾಡಿದ್ದ ಕೆಲಸಗಳಿಂದ ಕೂಡ ಮತದಾರರನ್ನು ಸೆಳೆಯುವುದು ಸಾಧ್ಯವಾಯಿತು. ಸಚಿವರುಗಳಾದ ಎಂ ಬಿ ಪಾಟೀಲ, ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಹಲವಾರು ಶಾಸಕರು, ಸಮಾಜದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು.
ಮುಸ್ಲಿಂ ಸಮುದಾಯದ ಮತಗಳ ಕಳೆದುಕೊಂಡಿದ್ದ ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳುವಂತೆ ಮಾಡಿದವು.
